ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರ ಅಭಿವೃದ್ಧಿಯೇ ನಮ್ಮ ಸರ್ಕಾರದ ಪ್ರಮುಖ ಗುರಿ ಎಂದು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಡಾ. ಮುರುಗೇಶ್ ಆರ್ ನಿರಾಣಿ ಹೇಳಿದರು. ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಐಮಾ ಅಗ್ರಿ ಮ್ಯಾಕ್ ಇಂಡಿಯಾ-2022ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮ ಕೃಷಿ ವಲಯದಲ್ಲಿ ಕ್ರಾಂತಿಯನ್ನು ಉಂಟು ಮಾಡುವುದರ ಜೊತೆಗೆ ರೈತರ ಕಲ್ಯಾಣಕ್ಕೆ ನೆರವಾಗಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ತೋಟಗಾರಿಕಾ ಸಚಿವ ಮುನಿರತ್ನ ಹಾಗೂ ಹಲವು ಕೈಗಾರಿಕೋದ್ಯಮಿಗಳು ಸಹ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿಗಳಾದ ಶಿವಯೋಗಿ ಸಿ. ಕಳಸದ್, ಕೃಷಿ ವಿವಿ ಜಿಕೆವಿಕೆಯ ಉಪ ಕುಲಪತಿಗಳಾದ ಎಸ್. ರಾಜೇಂದ್ರ ಪ್ರಸಾದ್, ಫೆಡರ್ ಯುನಾಕೋಮಾದ ಅಧ್ಯಕ್ಷರಾದ ಶ್ರೀ ಅಲೆಕ್ಸಾಂಡ್ರೆ ಮಲವೋ, ಎಫ್ಐಸಿಸಿಐ ಕೃಷಿ ಸಮಿತಿ ಅಧ್ಯಕ್ಷರಾದ ಟಿ.ಆರ್ ಕೇಶವನ್, ಎಫ್ಐಸಿಸಿಐ ಅಧ್ಯಕ್ಷರಾದ ಉಲ್ಲಾಸ್ ಕಾಮತ್,ಎಫ್ಐಸಿಸಿಐ ಕೃಷಿ ಉಪಸಮಿತಿಯ ಅಧ್ಯಕ್ಷರಾದ ರವೀಂದ್ರ ಅಗರ್ವಾಲ್ ಹಾಗೂ ಹಲವರು ಉಪಸ್ಥಿತರಿದ್ದರು.