ಹೊಸದಿಗಂತ ವರದಿ ಮಡಿಕೇರಿ:
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಆರಿಸಿ ಬಂದು ಮಡಿಕೇರಿ ಕ್ಷೇತ್ರದಲ್ಲಿ ಪ್ರವಾಸೋದ್ಯಮವನ್ನು ಸಿಂಗಾಪುರದ ಮಾದರಿಯಲ್ಲಿ ಅಭಿವೃದ್ದಿಪಡಿಸುವುದಾಗಿ ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಪೈಸಾರಿಯ ಬೂತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ ವಿರೋಧ ಸಲ್ಲದು ಎಂದರಲ್ಲದೆ, ಪ್ರವಾಸೋದ್ಯಮದಿಂದ ಆಗುವ ಲಾಭಕ್ಕೆ ಸಿಂಗಾಪುರದ ಉದಾಹರಣೆ ನೀಡಿದರು.
ಕಳೆದ ಐದು ಅವಧಿಯಲ್ಲಿ ಬಿಜೆಪಿ ಶಾಸಕರಾಗಿ ಮಾಡಿದ ಅಭಿವೃದ್ದಿ ಕೆಲಸಗಳ ಪಟ್ಟಿ ನೀಡಿದ ಅವರು, ಕಳೆದ ಐದು ವರ್ಷಗಳಲ್ಲಿ 1,800 ಕೋಟಿ ರೂ. ಗಳ ಅನುದಾನದಲ್ಲಿ ಆದ ಅಭಿವೃದ್ದಿ ಕೆಲಸ-ಕಾರ್ಯಗಳನ್ನು ವಿವರಿಸಿದರಲ್ಲದೆ, ಮೂಲಭೂತ ಸೌಲಭ್ಯಗಳ ಜೊತೆಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯೂ ಆಗಬೇಕಿದೆ ಎಂದರು.
ಪ್ರವಾಸೋದ್ಯಮದ ಅಭಿವೃದ್ಧಿಯಿಂದಾಗಿ ಪರಿಸರದ ಮೇಲೆ ಆಗುವ ಹಾನಿಯನ್ನು ಹೇಗೆ ನಿಯಂತ್ರಿಸಬಹುದು ಎನ್ನುವುದಕ್ಕೆ ಸಿಂಗಾಪುರ ಸಾಕ್ಷಿ ಎಂದ ಅಪ್ಪಚ್ಚು ರಂಜನ್, ಪ್ರವಾಸೋದ್ಯಮದ ಅಭಿವೃದ್ದಿಯಿಂದ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿ ನಿರುದ್ಯೋಗದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.