ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಅಪಾರ: ಗೋವಾ ಸಿಎಂ ಪ್ರಮೋದ ಸಾವಂತ್

ಹೊಸದಿಗಂತ ವರದಿ, ಅಂಕೋಲಾ:

ಸ್ವಚ್ಛ ಭಾರತದಿಂದ ಆರಂಭಿಸಿ ಸಶಕ್ತ ಭಾರತ ನಿರ್ಮಾಣದವರೆಗೆ ದೇಶವನ್ನು ಪ್ರಗತಿಯ ಪಥದಲ್ಲಿ ಸಮರ್ಥವಾಗಿ ಮುನ್ನೆಡೆಸುವ ಮೂಲಕ ವಿಶ್ವ ಮಟ್ಟದ ದೇಶದ ಘನತೆ ಹೆಚ್ಚಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ತಮ್ಮ ವಿಶೇಷ ಪರಿಕಲ್ಪನೆಗಳ ಮೂಲಕ ಅಭಿವೃದ್ಧಿ ಸಾಧಿಸುವ ಕೆಲಸ ಮೋದಿ ಸರ್ಕಾರದಿಂದ ನಡೆದಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದರು.

ಕಾರವಾರದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಅವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಸ್ವಾರ್ಥ ರಾಜಕಾರಣ ಮಾಡಿ ಕೇವಲ ಒಂದೇ ಕುಟುಂಬದ ಏಳಿಗೆಗಾಗಿ ದೇಶವನ್ನು ಲೂಟಿ ಮಾಡಿದೆ ಹಲವಾರು ದಶಕಗಳ ಕಾಲ ದೇಶ ಆಳಿ ಮಾಡಲಾಗದ ಅಭಿವೃದ್ಧಿ ಕೆಲಸಗಳನ್ನು ಕೆಲವೇ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿ ತೋರಿಸಿದೆ ಎಂದರು.

ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಅಪಾರ ಎಂದ ಅವರು ಸದಾ ಅಭಿವೃದ್ಧಿ ಪರ ಧೋರಣೆಗಳನ್ನು ಹೊಂದಿರುವ ರೂಪಾಲಿ ನಾಯ್ಕ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಎಲ್ಲರೂ ಒಂದಾಗಿ ಶ್ರಮಿಸುವಂತೆ ಕರೆ ನೀಡಿದರು.
ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಮಾತನಾಡಿ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರ ಪ್ರೀತಿ, ಅಭಿಮಾನ, ವಿಶ್ವಾಸಗಳಿಗೆ ಸದಾ ಋಣಿಯಾಗಿದ್ದು ಮತದಾರರ ಮನೆಗಳಿಗೆ ತೆರಳಿ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.

ಬಿಜೆಪಿ ಪ್ರಭಾರಿ ಮಾಜಿ ಕೇಂದ್ರ ಸಚಿವ ಪ್ರಮೋದ ಮಧ್ವರಾಜ್ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾ ಪ್ರಭಾರಿ ಪ್ರಸನ್ನ ಕೆರೆಕೈ, ಬಿಜೆಪಿ ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಜಗದೀಶ ನಾಯಕ ಮೊಗಟಾ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!