ಹೊಸ ದಿಗಂತ ವರದಿ, ಬನವಾಸಿ:
ಕದಂಬ ರಾಜಧಾನಿ ಬನವಾಸಿಯಲ್ಲಿ ಗುರುವಾರ ಭರ್ಜರಿ ಮಳೆಯಾಗಿದ್ದು, ಸುಮಾರು ಒಂದು ಗಂಟೆಯ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಭಾರೀ ಬಿಸಿಲಿನ ದಗೆಯಿಂದ ಕಾದ ಕಾವಲಿಯಾಗಿದ್ದ ಪಟ್ಟಣದಲ್ಲಿ ಗುರುವಾರ ಸಂಜೆ ಮಳೆಯಾಗಿದ್ದು, ಗುಡುಗು ಸಹಿತ ಮಳೆಯಾದ ಪರಿಣಾಮ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸಂಜೆ ಸುರಿದ ಭಾರಿ ಗಾಳಿ ಮಳೆಗೆ ರಾಜ್ಯ ಹೆದ್ದಾರಿ 137ರಲ್ಲಿ ಸಮೀಪದ ಹಾಡಲಗಿ ಗ್ರಾಮದ ಬಳಿ ಗೂಡ್ಸ್ ಆಟೋ ರಿಕ್ಷಾದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಆಟೋ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಭಸವಾಗಿ ಬೀಸಿದ ಗಾಳಿಗೆ ಹಾಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಲವು ಮನೆಗಳ ಹಂಚು ಹಾರಿ ಹೋಗಿದ್ದು ಸಾಕಷ್ಟು ಪ್ರಮಾಣದ ಹಾನಿ ಉಂಟಾಗಿದೆ. ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದು ಹೆಸ್ಕಾಂಗೆ ಹಾನಿ ಉಂಟು ಮಾಡಿದೆ.