ಧಾರವಾಡ ಕರ್ನಾಟಕದ ಪ್ರತಿಬಿಂಬ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಧಾರವಾಡದ ಐಐಟಿ ಕ್ಯಾಂಪಸ್, ಸಿದ್ದರೂಡ ಸ್ವಾಮೀಜಿ ರೈಲು ಪ್ಲಾಟ್‌ಫಾರ್ಮ್ ಸೇರಿದಂತೆ ಸೇರಿದಂತೆ ಹಲವು ಯೋಜನೆ ಉದ್ಘಾಟಿಸಿ ಪ್ರಧಾನಿ ಮೋದಿ ಜನತೆಯನ್ನುದ್ದೇಶಿ ಭಾಷಣ ಮಾಡಿದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಜಗದ್ದುಗುರು ಬಸವೇಶ್ವರ ಅವರಿಗೆ ನನ್ನ ನಮಸ್ಕಾರಗಳು, ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯ ಈ ನಾಡಿಗೆ, ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಮುಕ್ತವಾಗಿ ಮಾತನಾಡಿದರು.

ನನಗೆ ಈ ವರ್ಷದ ಆರಂಭದಲ್ಲಿ ಹುಬ್ಭಳ್ಳಿ ಆಗಮಿಸುವ ಸೌಭಾಗ್ಯ ಸಿಕ್ಕಿತ್ತು. ಯಾವ ರೀತಿ ಹುಬ್ಬಳ್ಳಿಯ ನನ್ನ ಪ್ರೀತಿಯ ಜನ, ರಸ್ತೆ ಬದಿಯಲ್ಲಿ ನಿಂತು ನನಗೆ ಆಶೀರ್ವಾದ ನೀಡಿದರು. ಆ ಕ್ಷಣವನ್ನು ನಾನು ಯಾವತ್ತೂ ಮರೆಯಲ್ಲ. ಅದಾದ ಬಳಿಕ ಕರ್ನಾಟಕದ ಹಲವು ಕ್ಷೇತ್ರಗಳಿಗೆ ತೆರಳುವ ಅವಕಾಶ ಸಿಕ್ಕಿದೆ. ಈ ವೇಳೆ ನನಗೆ ಕನ್ನಡಿಗರು ನೀಡಿದ ಸ್ನೇಹ, ಪ್ರೀತಿ, ಆಶೀರ್ವಾದ ನನಗೆ ಪ್ರೇರಣೆಯಾಗಿದೆ. ನನಗೆ ಅತೀ ದೊಡ್ಡ ಋಣ ಇದೆ. ಈ ಋಣವನ್ನು ನಾನು ಕರ್ನಾಟಕ ಜನತೆಯ ಸೇವೆ ಮಾಡಿ ಈ ಖಣ ತೀರಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಕರ್ನಾಟಕದ ಜನರ ಜೀವನ ಮಟ್ಟ ಸುಧಾರಿಸಬೇಕು, ಯುವಕರ ಭವಿಷ್ಯ ಉಜ್ವಲವಾಗಬೇಕು. ಇಲ್ಲಿನ ಯುವತಿ, ಮಹಿಳೆಯರ ಜೀವನಸಶಕ್ತವಾಗುವಂತೆ ನಾವು ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಪ್ರತಿ ಗ್ರಾಮ, ಜಿಲ್ಲೆಯ ಪೂರ್ಣ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ. ಇಂದು ಧಾರವಾಡದ ಭೂಮಿಯಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯುತ್ತಿದೆ. ಇದು ಇಡೀ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಲಿದೆ ಎಂದರು.

ಹಿಂದಿನಿಂದಲೂ ನಮ್ಮ ಧಾರವಾಡ, ಮಲೆನಾಡು, ಬಯಲುಸೇಮೆ ಇವೆಲ್ಲಾ ದ್ವಾರದ ರೂಪದಲ್ಲಿದೆ. ವಿವಿಧ ಕ್ಷೇತ್ರದ ಯಾತ್ರಿಕರಿಗೆ ಈ ನಾಡು ಹೆಬ್ಬಾಗಿಲು ಆಗಿವೆ. ಎಲ್ಲರನ್ನು ಮುಕ್ತವಾಗಿ ಸ್ವಾಗತಿಸಿದೆ. ಸಮೃದ್ಧವಾಗಿ ಬೆಳೆದಿದೆ. ಹೀಗಾಗಿ ಧಾರವಾಡ ಕೇವಲ ಒಂದು ದ್ವಾರವಲ್ಲ, ಕರ್ನಾಟಕದ ಪ್ರತಿಬಿಂಬವಾಗಿದೆ. ಇದು ಕರ್ನಾಟಕ ಸಾಂಸ್ಕೃತಿ ರಾಜಧಾನಿ. ಧಾರವಾಡ ಸಾಹಿತ್ತಿಕವಾಗಿ ಗುರುತಿಸಿಕೊಂಡಿದೆ. ಬಿಆರ್ ಬೇಂದ್ರೆ, ಪಂಡೀತ್ ಬೀಮ್‌ಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಪಂಡಿತ್ ಮಲ್ಲಿಕಾರ್ಜುನ್ ಸೇರಿದಂತೆ ಹಲವು ರತ್ನಗಳನ್ನು ಧಾರವಾಡ ನೀಡಿದೆ ಎಂದರು.

ಒಂದು ಬಾರಿ ಧಾರವಾಡ ಪೇಡ ಸ್ವಾದ ಸವಿದರೆ, ಮತ್ತೊಮ್ಮೆ ಸವಿಯಲು ಮನಸ್ಸಾಗುತ್ತಿದೆ. ಇಂದು ಪ್ರಹ್ಲಾದ್ ಜೋಶಿ ನನಗೆ ಧಾರವಾಡ ಪೇಡ ನೀಡಿದ್ದಾರೆ. ನನ್ನ ಆರೋಗ್ಯ ಕುರಿತು ಕಾಳಜಿ ಇರುವುದರಿಂದ ಬಂದ್ ಆಗಿರುವ ಬಾಕ್ಸ್‌ನಲ್ಲಿ ನೀಡಿದ್ದಾರೆ ಎಂದು ನಗೆಚಟಾಕಿ ಹಾರಿಸಿದರು.

ಮಂಡ್ಯದಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟಿಸುವ ಸೌಭಾಗ್ಯ ಸಿಕ್ಕಿತು. ಇತ್ತೀಚೆಗೆ ಬೆಳಗಾವಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಲಾಗಿದೆ. ಶಿವಮೊಗ್ಗದಲ್ಲಿ ಕುವೆಂಪು ವಿಮಾನ ನಿಲ್ದಾಣ ಉದ್ಘಾಟನೆಯಾಗಿದೆ ಎಂದರು.

ಐಐಟಿ ಧಾರವಾಡ ಹೈಟೆಕ್ ಸೌಲಭ್ಯ ಹೊಂದಿರುವ ಮೂಲಕ ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿಸಲು ನೆರವಾಗಲಿದೆ. ಇದು ಬಿಜೆಪಿ ಸರ್ಕಾರದ ಸಂಕಲ್ಪ ಹಾಗೂ ಸಾಕಾರಗೊಳಿಸಿದ ಉದಾಹರಣೆಯಾಗಿದೆ. 4 ವರ್ಷಗಳ ಹಿಂದೆ ನಾನು ಈ ಆಧುನಿಕ ಶಿಕ್ಷಣ ಸಂಸ್ಥೆಯ ಶಿಲನ್ಯಾಸ ಮಾಡಿದೆ. ಬಳಿಕ ಕೊರೋನಾ ಕಾರಣದಿಂದ ಕಾಮಗಾರಿಯಲ್ಲಿ ಕೊಂಚ ವಿಳಂಬವಾಯಿತು. ಆದರೆ ನಾಲ್ಕು ವರ್ಷದೊಳಗೆ ಇದೀಗ ಉದ್ಘಾಟನೆಯಾಗಿದೆ. ಶಿಲನ್ಯಾಸ ಹಾಗೂ ಉದ್ಘಾಟನೆ ವರೆಗೆ ಯಾವ ವೇಗದಲ್ಲಿ ಕಾಮಗಾರಿಯಾಗಿದೆ. ಅದೇ ರೀತಿಯಲ್ಲಿ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ನಾವು ಶಿಲನ್ಯಾಸ ಮಾಡಿ ಮರೆತು ಬಿಡುವ ಜಾಯಮಾನದವರಲ್ಲ. ಸ್ವತಂತ್ರ ಭಾರತದ ಬಳಿಕ ಹಲವು ದಶಕಗಳ ವರೆಗೆ ಶಿಕ್ಷಣ ಸಂಸ್ಥೆಯ ವಿಸ್ತರಣೆ, ಹೊಸ ಕಟ್ಟಡ ಕನಸಿನ ಮಾತಾಗಿತ್ತು. ಆದರೆ ಇದು ನವ ಭಾರತವಾಗಿದೆ. ಯುವ ಸಮೂಹ ಈ ಹಳೇ ಸಂಪ್ರದಾಯ ಚಿಂತಿಸಲು ಸಾಧ್ಯವಿಲ್ಲ. ಅತ್ಯುತ್ತಮ ಶಿಕ್ಷಣ ಸಂಸ್ಥೆ ಇದ್ದರೆ, ಅಷ್ಟೇ ಅತ್ಯುತ್ತಮ ಯುವ ಸಮೂಹ ನಿರ್ಮಾಣವಾಗಲಿದೆ. ಕೆದ 9 ವರ್ಷದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಸಂಖ್ಯೆ ದ್ವಿಗುಣವಾಗಿದೆ. ಏಮ್ಸ್ ಸಂಖ್ಯೆ ದ್ವಿಗುಣವಾಗಿದೆ ಎಂದು ಮೋದಿ ಹೇಳಿದ್ದಾರೆ.

9 ವರ್ಷದಲ್ಲಿ ಹಲವು ಐಐಎಂ ಹಾಗೂ ಐಐಟಿ ತೆರೆಯಲಾಗಿದೆ. ಇದಕ್ಕೆ ಉದಾಹರಣೆ ಇಂದು ಧಾರವಾಡದಲ್ಲಿ ಉದ್ಘಾಟನೆಯಾಗಿರುವುದು. ಬಿಜೆಪಿ ಸರ್ಕಾರ, ಹುಬ್ಬಳ್ಳಿ ಧಾರವಾಡವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿಸಲಾಗಿದೆ. ಇದರ ಕಾರಣದಿಂದ ಹಲವು ಸ್ಮಾರ್ಟ್ ಸಿಟಿ ಯೋಜನೆಗಳು ಚಾಲ್ತಿಯಲ್ಲಿದೆ. ತಂತ್ರಜ್ಞಾನ, ಸ್ಮಾರ್ಟ್ ಆಡಳಿತ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.

ಬೆಂಗಳೂರು, ಮೈಸೂರು, ಕಲಬುರುಗಿಯಲ್ಲಿ ಜಯದೇವ ಆಸ್ಪತ್ರೆ ಸೌಲಭ್ಯವಿದೆ. ಇದೀಗ ಹುಬ್ಭಳ್ಳಿಯಲ್ಲಿ ಲಭ್ಯವಿದೆ. ಇನ್ನು ಹಲವು ಕ್ಷೇತ್ರಗಳಿಗೆ ಜಯದೇವ ಆಸ್ಪತ್ರೆ ಸೌಲಭ್ಯ ಸಿಗಲಿದೆ. ಧಾರವಾಡ-ಹುಬ್ಬಳ್ಳಿ ಆಸುಪಾಸಿನ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ಸೌಲಭ್ಯ ನೀಡಲಾಗಿದೆ ಎಂದರು.

ಸಂಪರ್ಕ ಸೇತುವೆಯಲ್ಲಿ ಕರ್ನಾಟಕದ ಹೊಸ ಮೈಲಿಗಲ್ಲು ನಿರ್ಮಿಸಿದೆ. ಸಿದ್ದರೂಡ ಸ್ವಾಮೀಜಿ ರೈಲು ನಿಲ್ದಾಣ, ವಿಶ್ವದ ಅತೀ ದೊಡ್ಡ ಪ್ಲಾಟ್‌ಫಾರ್ಮ್ ಆಗಿದೆ. ಇದು ಕೇವಲ ದಾಖಲೆ ಮಾತ್ರವಲ್ಲ, ಇದು ಮೂಲಭೂತ ಸೌಕರ್ಯ ಸಾಕಾರಗೊಳಿಸುವ ಯೋಚನೆ, ಹಾಗೂ ಅಭಿವೃದ್ಧಿಯ ಮೂಲಮಂತ್ರದ ಪರಿಣಾಮವಾಗಿದೆ. ರೈಲು ವಿದ್ಯುದ್ದೀಕರಣ ಯೋಜನೆ ಚಾಲ್ತಿಯಲ್ಲಿದೆ. ಇದರಿಂದ ಕಡಿಮೆ ಡೀಸೆಲ್ ಬಳಕೆಯಾಗಲಿದೆ.ಅತ್ಯುತ್ತಮ ಮೂಲಭೂತ ಸೌಕರ್ಯ, ಜನರ ಜೀವನ ಸುಧಾರಿಸಬೇಕು. ಇದು ಉತ್ತಮ ಜೀವನಕ್ಕೆ ಹೊಸ ದಾರಿ ತೆರೆಯಲಿದೆ ಎಂದರು.

ಕೇವಲ ರಸ್ತೆ ಮಾತ್ರವಲ್ಲ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ನಿರ್ಮಾಣಗೊಂಡಿದೆ. 2014ರ ಹಿಂದೆ ಭಾರತದಲ್ಲಿ ಡಿಜಿಟಲ್ ಚರ್ಚೆ ಇಲ್ಲವಾಗಿತ್ತು. ಆದರೆ ಇದೀಗ ಭಾರತ ಅತೀ ದೊಡ್ಡ ಡಿಜಿಟಲ್ ಎಕಾನಮಿ ದೇಶವಾಗಿದೆ.ಅತೀ ಸುಲಭವಾಗಿ ಇಂಟರ್ನೆಟ್ ಸೇವೆ ಎಲ್ಲರಿಗೂ ಸಿಗುವಂತೆ ಮಾಡಲಾಗಿದೆ. ಇದರಿಂದ ದೇಶ ಡಿಜಿಟಲ್ ಯುಗವಾಗಿ ಮಾರ್ಪಟ್ಟಿದೆ ಎಂದರು.

ಬಸವೇಶ್ವರ ಭೂಮಿಗೆ ನಾನು ಆಗಮಿಸಿದ್ದೇನೆ.ಭಗವಾನ್ ಬಸೇವೇಶ್ವರವರ ಅವರ ಹಲವು ಯೋಜನೆಗಳಲ್ಲಿ ಅನುಭವ ಮಂಟಪ ಸ್ಥಾಪಿಸಿರುವುದು ಅತ್ಯಂತ ಪ್ರಮುಖವಾಗಿದೆ. ಲಂಡನ್‌ನಲ್ಲಿ ಬಸವೇಶ್ವರ ಪ್ರತಿಮೆ ಲೋಕಾರ್ಪಣೆ ಮಾಡುವ ಅವಕಾಶ ಸಿಕ್ಕಿತ್ತು. ಇದೇ ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನಿಸುವ ಕೆಲಸ ಮಾಡಲಾಗುತ್ತದೆ. ವಿಶ್ವದ ಯಾವುದೇ ಶಕ್ತಿಗೆ ಭಾರತದ ಪ್ರಜಾಪ್ರಭುತ್ವವನ್ನು ಏನೂ ಮಾಡಲು ಸಾಧ್ಯವಿಲ್ಲ. ಭಾರತ ಪ್ರಜಾಪ್ರಭುತ್ವವನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ವ್ಯಕ್ತಿಗಳು ಬಸವೇಶ್ವರರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಕನ್ನಡಿಗರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ಇಂತಹ ವ್ಯಕ್ತಿಗಳನ್ನು ಕರ್ನಾಟಕ ಜನರು ದೂರವಿಡಬೇಕು ಎಂದು ಮೋದಿ ಪರೋಕ್ಷಾಗಿ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!