ದಿಗಂತ ವರದಿ ಹುಬ್ಬಳ್ಳಿ:
ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ರಾಜ್ಯ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಹು-ಧಾ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಗೋಕುಲ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಕಾಂಗ್ರೆಸ್ ನುಡಿದಂತೆ ನಡೆದ ಸರ್ಕಾರ ಅದಕ್ಕೆ ಪ್ರತಿಯೊಬ್ಬರಿಗೆ ಗ್ಯಾರಂಟಿ ಯೋಜನೆ ತಲುಪಿರುವುದೇ ಸಾಕ್ಷಿ . ಆದ್ದರಿಂದ ಕಾಂಗ್ರೆಸ್ಗೆ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಏನು ನ್ಯಾಯ ನೀಡಿದೇ ಎಂದು ಮತ ಹಾಕಬೇಕು. ಕಳೆದ ಬಾರಿ ರಾಜ್ಯದಲ್ಲಿ ೨೬ ಸಂಸದರ ಗೆಲ್ಲಿಸಿದ ಜನತೆಗೆ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ತೆರಿಗೆ ಹಂಚಿಕೆ ಹಾಗೂ ಬರ ಪರಿಹಾರಕ್ಕಾಗಿ ನಾವು ದೆಹಲಿಗೆ ಹೋರಾಟ ಮಾಡಿದರೂ ಸಹ ಸಂಸದರು ಅನ್ಯಾಯ ಸರಿಪಡಿಸುವ ಕಾರ್ಯ ಮಾಡಲಿಲ್ಲ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಮೇಲೆ ಒತ್ತಡ ಹಾಕಲಿಲ್ಲ. ಇವರೆಲ್ಲರೂ ಹೇಡಿಗಳು ಎಂದು ಹರಿಹಾಯ್ದರು.
ರಾಜ್ಯ ಎಲ್ಲ ಜನರ ಹಣ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತದೆ. ನಮ್ಮ ಪಾಲಿನ ತೆರಿಗೆ ಹಣ ನೀಡಲು ಕೇಂದ್ರ ಮೀನಾಮೇಶ ಮಾಡುತ್ತಿದೆ. ಇನ್ನೂ ಬರ ಪರಿಹಾರ ಕಡಿಮೆ ನೀಡಿದೆ. ಅದು ನ್ಯಾಯಾಲಯದಲ್ಲಿ ಹೋರಾಟ ಮಾಡಿದರ ಫಲವಾಗಿ. ಇಂತಹ ಸರ್ಕಾರ ನಿಮಗೆ ಬೇಕಾ ಎಂದು ಪ್ರಶ್ನಿಸಿದ ಅವರು, ಈ ಭಾಗದ ಸಂಸದ ಕೇಂದ್ರ ಮಂತ್ರಿಯಾದ ಪ್ರಹ್ಲಾದ ಜೋಶಿ ಅವರನ್ನು ಸೋಲಿಸಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಯತಿಂದ್ರ ಸಿದ್ದರಾಮಯ್ಯ, ದೀಪಕ ಚಿಂಚೋರೆ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಗೀತಾ ತೌಶಿ, ಸದಾನಂದ ಡಂಗನವರ, ಮೋಹನ ಹಿರೇಮನಿ ಇದ್ದರು.