ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ನ ರೋಚಕ ಹಣಾಹಣಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಬೆಂಗಳೂರು ತಂಡ ಸೋಲು ಕಂಡ ಪಂದ್ಯ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿಯ ಔಟ್ ಹಿಂದೆ ಅಚ್ಚರಿಯ ಸಂಗತಿ ಹೊರಬಿದ್ದಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಭರ್ಜರಿ 209 ರನ್ ಕಲೆಹಾಕಿತು. ಮಳೆ ಅಡ್ಡಿಯಾದ ಕಾರಣ ಗುರಿ ಬೆನ್ನಟ್ಟಿದ ಬೆಂಗಳೂರು ತಂಡ ಡಿಎಲ್ಎಸ್ ನಿಯಮದಂತೆ 9 ರನ್ ಅಂತರದಿಂದ ಸೋಲನ್ನು ಒಪ್ಪಿಕೊಂಡಿತು. ಈ ವೇಳೆ ಆರಂಭದಲ್ಲೇ ವಿರಾಟ್ ಕೊಹ್ಲಿ ಖಾತೆ ತೆರೆಯದೇ ನಿರ್ಗಮಿಸಿದ್ದು ತಂಡಕ್ಕೆ ದೊಡ್ಡ ಹೊಡೆತವಾಯಿತು.
ಇದನ್ನೂ ಓದಿ:
ವೇಗಿ ಪ್ರಿನ್ಸ್ ಯಾದವ್ ಎಸೆದ ವೇಗದ ಔಟ್ ಸ್ವಿಂಗ್ ಚೆಂಡಿಗೆ ಕೊಹ್ಲಿ ವಿಕೆಟ್ ಒಪ್ಪಿಸಿದರು. ಪಂದ್ಯದ ಬಳಿಕ ಮಾತನಾಡಿದ ಪ್ರಿನ್ಸ್, ಇದೇ ಲೆಂತ್ನಲ್ಲಿ ಬೌಲಿಂಗ್ ಮಾಡಲು ಕೆಲ ದಿನಗಳ ಹಿಂದೆ ಸ್ವತಃ ಕೊಹ್ಲಿಯೇ ಸಲಹೆ ನೀಡಿದ್ದರು ಎಂದು ಬಹಿರಂಗಪಡಿಸಿದರು. ಚೆಂಡು ಸ್ವಿಂಗ್ ಆಗುವವರೆಗೆ ಅದೇ ಲೆಂತ್ ಮುಂದುವರಿಸು ಎಂಬ ಮಾತನ್ನು ಮನದಲ್ಲಿ ಇಟ್ಟುಕೊಂಡು ಬೌಲಿಂಗ್ ಮಾಡಿದ್ದಾಗಿ ಹೇಳಿದರು.
ಅದೇ ತಂತ್ರ ಕೊನೆಗೆ ಕೊಹ್ಲಿಯ ವಿಕೆಟ್ಗೆ ಕಾರಣವಾಯಿತು. ಪಂದ್ಯದಲ್ಲಿ ಮೂರು ಪ್ರಮುಖ ವಿಕೆಟ್ ಕಬಳಿಸಿದ ಪ್ರಿನ್ಸ್, ಲಖನೌ ಗೆಲುವಿನ ಹೀರೋ ಎನಿಸಿಕೊಂಡರು. ಯುವ ಬೌಲರ್ನ ಈ ಪ್ರದರ್ಶನ ಇದೀಗ ರಾಷ್ಟ್ರೀಯ ತಂಡದ ಬಾಗಿಲನ್ನೂ ತೆರೆಸುವ ಲಕ್ಷಣ ಕಾಣಿಸುತ್ತಿದೆ.



