ಹೊಸ ದಿಗಂತ ಡಿಜಿಟಲ್ ಡೆಸ್ಕ್ :
2023ರ ವಿಧಾನಸಭಾ ಚುನಾವಣೆಗೆ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರನ್ನು ರಾಜ್ಯ ಚುನಾವಣಾ ಆಯೋಗ ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ನೇಮಕ ಮಾಡಿ ಆದೇಶ ಮಾಡಿದೆ.
ಚುನಾವಣೆ ಸಂದರ್ಭ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರೀಡಾಪಟುಗಳು, ಚಲನಚಿತ್ರ ನಿರ್ದೇಶಕರು, ನಟರು ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಪ್ರತಿಷ್ಠಿತರನ್ನು ಚುನಾವಣಾ ಪ್ರಚಾರದ ಐಕಾನ್ ಆಗಿ ನೇಮಕ ಮಾಡುತ್ತದೆ. ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ನಿರ್ದೇಶಕ ರಾಜಮೌಳಿ ಅವರ ಹೆಸರನ್ನು ನೇಮಕ ಶಿಫಾರಸು ಮಾಡಲಾಗಿತ್ತು.
ಈ ಬಗ್ಗೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಮಾತನಾಡಿ, ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿಯವರನ್ನು ರಾಯಚೂರು ಜಿಲ್ಲೆಯ ಚುನಾವಣಾ ಐಕಾನ್ ಆಗಿ ಆಯ್ಕೆ ಮಾಡಲಾಗಿದೆ. ಅವರು ಮೂಲತಃ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಅಮರೇಶ್ವರ ಕ್ಯಾಂಪ್ನವರಾಗಿದ್ದು ಜಿಲ್ಲೆಯ ಚುನಾವಣೆ ಐಕಾನ್ ಆಗಿ ಆಯ್ಕೆ ಮಾಡಲಾಗಿದೆ. ಚುನಾವಣೆ ಮತದಾನ ಕುರಿತು ಜಾಗೃತಿ ಮೂಡಿಸಲು ನಿಟ್ಟಿನಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.