ನೀತಿ ಸಂಹಿತೆ ಹೆಸರಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ: ಆಯೋಗದ ಆದೇಶಕ್ಕೆ ಹೈಕೋರ್ಟ್ ತಡೆ

ಹೊಸದಿಗಂತ ವರದಿ, ಮಡಿಕೇರಿ:

ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಚುನಾವಣಾ ಆಯೋಗದ ಆದೇಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆ ನೀಡಿದೆ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಪ್ರವಚನ(ಭಾಷಣ)ಕ್ಕೆ ಅವಕಾಶವಿಲ್ಲವೆಂದು ಆದೇಶ ನೀಡುವ ಮೂಲಕ ಸಂವಿಧಾನ ದತ್ತವಾದ ಧಾರ್ಮಿಕ ಹಕ್ಕನ್ನು ಕಸಿದುಕೊಂಡಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಕೊಡಗು ಜಿಲ್ಲೆಯ ಹಿಂದೂ ಜಾಗರಣ ವೇದಿಕೆಯ ಹಿರಿಯ ಸದಸ್ಯ ಸುನಿಲ್ ಮಾದಾಪುರ ಅವರು , ಹಿರಿಯ ವಕೀಲರಾದ ಅರುಣ್ ಶ್ಯಾಂ, ಸುಯೋಗ್ ಹೇರಳೆ ಹಾಗೂ ಮೂಲತಃ ಕೊಡಗಿನವರಾದ ಹೈಕೋರ್ಟ್’ನ ಯುವ ವಕೀಲ ಶಾಂತೆಯಂಡ ನಿಶಾಂತ್ ಕುಶಾಲಪ್ಪ ಅವರ ಮೂಲಕ ಹೈಕೋರ್ಟ್’ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದರು.

ಚುನಾವಣಾ ಆಯೋಗದ ನಿರ್ಬಂಧವನ್ನು ಪರಿಶೀಲಿಸಿದ ರಾಜ್ಯ ಉಚ್ಛ ನ್ಯಾಯಾಲಯ, ಧಾರ್ಮಿಕ ಕಾರ್ಯಕ್ರಮದಲ್ಲಿ ನಡೆಯುವ ರಾಜಕೀಯ ರಹಿತ ಭಾಷಣಕ್ಕೆ ಅವಕಾಶ ನೀಡಿದೆ.

ಅದರ ಅನ್ವಯ ಮಾ.30ರ ಶನಿವಾರ ಮಾದಾಪುರದಲ್ಲಿ ನಡೆಯಲಿರುವ ‘ರಾಮನವಮಿ’ ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಮಾಡಲಿರುವ ಭಾಷಣಕ್ಕೆ ಇದ್ದ ತಡೆ ನಿವಾರಣೆಯಾಗಿದೆ.

ಮಾದಾಪುರದಲ್ಲಿ ಅಂದು ಮಧ್ಯಾಹ್ನ 2 ಗಂಟೆಯಿಂದ ಶೋಭಾಯಾತ್ರೆ ಆರಂಭಗೊಂಡು ಸಂಜೆ 5 ಗಂಟೆಗೆ ಮಾದಾಪುರ ಬಸ್ ನಿಲ್ದಾಣದಲ್ಲಿ ಬೃಹತ್ ಸಭೆ ನಡೆಯಲಿದೆ. ಯುವ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದು, ಮಾದಾಪುರದ ಕಾಫಿ ಬೆಳೆಗಾರ ಮಂಡೇಟಿರ ಅನಿಲ್ ಪೊನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!