ಹೊಸದಿಗಂತ ವರದಿ,ಚಿತ್ರದುರ್ಗ :
ರಾಜ್ಯದಲ್ಲೇ ಅತಿ ಹೆಚ್ಚು ಜನರು ಭಾಗವಹಿಸುವ ಹಿನ್ನೆಲೆಯಲ್ಲಿ ನಾಡು ಮತ್ತು ದೇಶದ ಗಮನಸೆಳೆದಿರುವ ಕೋಟೆನಾಡಿನ ಹಿಂದು ಮಹಾಗಣಪತಿ ಉತ್ಸವದ ಶೋಭಾಯಾತ್ರೆ ಅ.೦೮ ರ ಭಾನುವಾರ ನಡೆಯಲಿದ್ದು, ಕ್ಷಣಗಣನೆ ಶುರುವಾಗಿದೆ.
ಶೋಭಾಯಾತ್ರೆ ಅಂಗವಾಗಿ ಚಳ್ಳಕೆರೆ ರಸ್ತೆಯಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೂ ವಿವಿಧ ವರ್ಣಗಳಲ್ಲಿ ಕಂಗೊಳಿಸುತ್ತಿರುವ ವೈವಿಧ್ಯಮಯ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಇದು ಸಾಂಸ್ಕೃತಿಕ ನಗರಿ ಮೈಸೂರು ದಸರಾವನ್ನೇ ನೆನಪು ಮಾಡುವಂತಿದ್ದು, ದಾರಿಹೋಕರನ್ನು ಆಕರ್ಷಿಸುತ್ತಿದೆ. ಎರಡು ಲಕ್ಷಕ್ಕೂ ಹೆಚ್ಚು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ನಾಡಿನ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.
ಮಹಾಗಣಪನ ವಿಸರ್ಜನಾ ಮಹೋತ್ಸವಕ್ಕೆ ಇಡೀ ನಗರ ಈಗಾಗಲೇ ಕೇಸರಿಮಯವಾಗಿದೆ. ಇದಕ್ಕಾಗಿ ಸಾವಿರಾರು ಮೀಟರ್ ಕೇಸರಿ ಬಟ್ಟೆ ಬಳಸಲಾಗಿದೆ. ಮದಕರಿ ನಾಯಕ ಪ್ರತಿಮೆ ಹಿಂಭಾಗ ಆದಿಯೋಗಿ ಪ್ರತಿಮೆ, ಮುಂಭಾಗ ಕೋಟೆನಾಡನ್ನು ಪ್ರತಿಬಿಂಬಿಸುವ ಐತಿಹಾಸಿಕ ಒಂಟಿಕಲ್ಲು ಬಸವನ ದೇಗುಲ, ಉಯ್ಯಾಲೆ ಕಂಬದ ಮಾದರಿಯ ಚಿತ್ರಗಳೊಂದಿಗೆ ಕಂಗೊಳಿಸುತ್ತಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅಲಂಕಾರ ಕಾರ್ಯ ನಡೆಯಿತು. ಶುಕ್ರವಾರ ಸಂಜೆಯ ಬಳಿಕ ನೋಡುಗರ ಸೆಲ್ಫಿ ಕ್ರೇಜ್ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ವೀರವನಿತೆ ಒನಕೆ ಓಬವ್ವ ವೃತ್ತ, ವಾಸವಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತಗಳಲ್ಲಿನ ಅಲಂಕಾರ ಜನರನ್ನು ತನ್ನತ್ತ ಸೆಳೆಯುತ್ತಿದೆ. ದೀಪಾಲಂಕಾರದಿಂದ ಪ್ರಮುಖ ವೃತ್ತಗಳು, ಅಂಗಡಿ ಮುಂಗಟ್ಟುಗಳು ಝಗಮಗಿಸುತ್ತಿವೆ.
ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ‘ಓಂ’ ಚಿನ್ಹೆಯುಳ್ಳ, ‘ವೀರಾಂಜನೇಯಸ್ವಾಮಿ’ ಭಾವಚಿತ್ರ ಇರುವ ಬೃಹತ್ ಗಾತ್ರದ ಧ್ವಜಗಳನ್ನು ಕಟ್ಟಲಾಗಿದೆ. ಇದಲ್ಲದೇ ಯಾತ್ರೆಗೆ ಶುಭಾಶಯ ಕೋರುವ ಬ್ಯಾನರ್, ಬಂಟಿಗ್ಸ್ಗಳು, ಗಣ್ಯರ, ರಾಜಕೀಯ ಮುಖಂಡರ ಆಳೆತ್ತರದ ಕಟೌಟ್ಗಳು ಎದ್ದು ನಿಂತಿವೆ.
ಶೋಭಾಯಾತ್ರೆಗೆ ಚಾಲನೆ : ಜೈನಧಾಮದ ಬಳಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಗೆ ಭಾನುವಾರ ಬೆಳಗ್ಗೆ ೧೦ಕ್ಕೆ ಮಹಾಮಂಗಳಾರತಿ ಪೂಜೆ ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ಸಿಗಲಿದೆ. ಇದೇ ವೇಳೆ ವಿವಿಧ ಮಾದರಿಯ ಹೂವಿನ ಹಾರಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ವಿಎಚ್ಪಿ ಮತ್ತು ಬಜರಂಗದಳದ ಪ್ರಮುಖರು ಭಾಗವಹಿಸಲಿದ್ದಾರೆ.
ಉಪಾಹಾರ ವ್ಯವಸ್ಥೆ : ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಜನರಿಗೆ ಊಟ, ಉಪಾಹಾರ, ನೀರು ಉಚಿತ ವ್ಯವಸ್ಥೆ ಮಾಡಲು ಹಲವು ಸಂಘಟನೆಗಳು ಟೊಂಕ ಕಟ್ಟಿ ನಿಂತಿವೆ. ಶೋಭಾಯಾತ್ರೆ ಸಾಗುವ ಮಾರ್ಗ ಮಧ್ಯೆ ಪುಲಾವ್, ಪುಳಿಯೊಗರೆ, ಚಿತ್ರನ್ನ, ಮೊಸರನ್ನ, ನೀರು, ಮಜ್ಜಿಗೆ ವಿತರಿಸಲು ಸಿದ್ಧತೆಗಳು ನಡೆಯಲಿವೆ. ಬಾಣಸಿಗರು ಅ.೭ರ ಶನಿವಾರ ರಾತ್ರಿಯಿಂದಲೇ ಅಡುಗೆಗೆ ಸಿದ್ಧತೆ ಆರಂಭಿಸಿಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ: ಶೋಭಾಯತ್ರೆಯು ಫೇಸ್ಬುಕ್, ವಾಟ್ಸ್ಆ?ಯಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದೆ. ನಗರದೊಳಗೆ ಕೆಎಸ್ಆರ್ಟಿಸಿ, ಖಾಸಗಿ ಬಸ್ ಸೇರಿ ಭಾರೀ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಮೊಬೈಲ್, ಸರಗಳ್ಳರ ಕುರಿತು ಇರಲಿ ಎಚ್ಚರ : ಸರಗಳ್ಳರು, ಜೇಬುಗಳ್ಳರು, ಮೊಬೈಲ್ ಕಳ್ಳರು ಮೊದಲಾದ ದುಷ್ಕರ್ಮಿಗಳ ಪತ್ತೆಗೆ ವಿವಿಧ ಜಿಲ್ಲೆಗಳಿಂದ ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂದಿಳಿದಿದ್ದಾರೆ. ಆದರೂ ಜನರು ತಮ್ಮ ಬೆಲೆ ಬಾಳುವ ವಸ್ತುಗಳ ಕುರಿತು ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಸಲಹೆ ನೀಡಿದೆ.
ಮಾರುಕಟ್ಟೆ ಸ್ತಬ್ಧ : ಬಹುತೇಕ ಇಡೀ ಊರಿನ ವ್ಯಾಪಾರ-ವಹಿವಾಟು ಭಾನುವಾರ ಸ್ತಬ್ಧವಾಗಲಿದೆ. ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆ ಕೂಡ ಇದಕ್ಕೆ ಹೊರತಾಗಿಲ್ಲ. ಗಾಂಧಿ ವೃತ್ತ, ಸಂತೆ ಹೊಂಡ, ಮೆದೇಹಳ್ಳಿ ರಸ್ತೆ ಬಳಿ ಹೆಚ್ಚು ಜನಜಂಗುಳಿ ಉಂಟಾಗುವ ನಿರೀಕ್ಷೆ ಇದೆ.