ಹೊಸದಿಗಂತ ವರದಿ ಕುಶಾಲನಗರ:
ವಾಲ್ಮೀಕಿ ಅಭಿವೃದ್ದಿ ನಿಗಮದ ವತಿಯಿಂದ ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ವ್ಯಾಪ್ತಿಯ ಗಿರಿಜನ ನಿವಾಸಿಗಳಿಗೆ ಕುರಿಗಳನ್ನು ಉಚಿತವಾಗಿ ಶಾಸಕ ಅಪ್ಪಚ್ಚು ರಂಜನ್ ವಿತರಿಸಿದರು.
ಇದುವರೆಗೂ ಪ್ರಸಕ್ತ ಸಾಲಿನಲ್ಲಿ 200 ಕುಟುಂಬಗಳಿಗೆ ತಲಾ 4 ರಂತೆ ಅಂದರೆ ಮೂರು ಹೆಣ್ಣು ಹಾಗೂ ಒಂದು ಗಂಡು ಮರಿಗಳಂತೆ ಒಟ್ಟು 800 ಕುರಿಗಳನ್ನು ವಿತರಿಸಲಾಗಿದೆ.ಗಿರಿಜನರು ಆರ್ಥಿಕವಾಗಿ ಸದೃಢರಾಗಲು ಕುರಿ ಸಾಕಣೆ ಪ್ರಯೋಜನಕಾರಿ ಎಂದು ಶಾಸಕ ರಂಜನ್ ಹೇಳಿದರು.
ಬಸವನಹಳ್ಳಿಯ ಗಿರಿಜನ ಸಹಕಾರ ಸಂಘ ಗಿರಿಜನರ ಕಲ್ಯಾಣಕ್ಕೆ ಅಗತ್ಯವಾದ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ ಎಂದ ಶಾಸಕರು, ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು ಅವರ ಶ್ರಮದ ಫಲವಾಗಿ ನಷ್ಟಕ್ಕೆ ಸಿಲುಕಿದ್ದ ಸಹಕಾರ ಸಂಘ ಚೇತರಿಕೆ ಕಾಣುತ್ತಿದೆ. ಸಂಘದ ಹಣವನ್ನು ದುರುಪಯೋಗ ಮಾಡಿಕೊಂಡ ಹಿಂದಿನ ಅಧ್ಯಕ್ಷ ರಾಜಾರಾವ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು, ಸಂಘದ ಉಪಾಧ್ಯಕ್ಷ ಬಿ.ಎನ್.ಮನು, ನಿರ್ದೇಶಕ ಅಣ್ಣಯ್ಯ, ಪಂಚಾಯಿತಿ ಸದಸ್ಯ ಮಾದಪ್ಪ, ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಚಂದ್ರಶೇಖರ್ ಇದ್ದರು