ಹೊಸದಿಗಂತ ವರದಿ, ಮದ್ದೂರು :
ನಾಡಿನ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಕರಿ ವೃಷಭ ದೇಶಿಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ ನುಡಿದರು.
ತಾಲೂಕಿನ ಕದಲೂರು ಗ್ರಾಮದಲ್ಲಿ ಶ್ರೀ ಪಟ್ಟಲದಮ್ಮ ದೇವಿ ಕಾರ್ತಿಕ ಮಾಸದ ದೀಪೋತ್ಸವದ ವೇಳೆ ಕೆರೆ ಬಾಗೀನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿ.ಕೆ.ಶಿವಕುಮಾರ್ ನಮ್ಮ ಮಠದ ಪರಮಭಕ್ತರು. ಅವರು ಮುಖ್ಯಮಂತ್ರಿಯಾಗುವುದಕ್ಕೆ ನಮ್ಮ ಆಶೀರ್ವಾದವಿದೆ. ಅವರಿಗಾಗಿ ನಾವು ಭಗವಂತನಲ್ಲಿ ಸಂಕಲ್ಪವನ್ನೂ ಮಾಡಿದ್ದೇವೆ. ನಮ್ಮ ಹಾಗೂ ನಿಮ್ಮೆಲ್ಲರ ಆಶಯದಂತೆ ದೇವರ ಆಶೀರ್ವಾದದಿಂದ ಡಿ.ಕೆ.ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಖಚಿತವಾಗಿ ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದ ಕೆ.ಎಂ.ಉದಯ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ನನ್ನ ಪಾತ್ರವೂ ಇದೆ. ಡಿಕೆಶಿ ಅವರು ನನ್ನ ಸಲಹೆ ಪಡೆದುಕೊಂಡು ಉದಯ್ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಶಾಸಕ ಕೆ.ಎಂ.ಉದಯ್ ಅವರಿಗೆ ಮದ್ದೂರು ಕ್ಷೇತ್ರದ ಜನರು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಸಚಿವರನ್ನಾಗಿ ಮಾಡುವ ಜವಾಬ್ದಾರಿ ನನ್ನದು ಎಂದು ತಿಳಿಸಿದರು.