ಹೊಸದಿಗಂತ ಹಾವೇರಿ:
ಕಾಂಗ್ರೆಸ್ ಮುಖಂಡನೋರ್ವ ಡಿಸಿಎಂ ಡಿ.ಕೆ. ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಮುಖಂಡನಿಗೆ DK ಶಿವಕುಮಾರ್ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಮೇ 4, ಶನಿವಾರ ರಾತ್ರಿ ಸವಣೂರು ಪಟ್ಟಣದಲ್ಲಿ ಪ್ರಚಾರಕ್ಕೆ ಡಿಕೆಶಿ ಬಂದಿದ್ದರು. ಅಲ್ಲಿ ‘ಕೈ’ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರಕ್ಕೆ ಬಂದಿದ್ದ ವೇಳೆ ಕಾರ್ಯಕರ್ತರು DK DK ಎಂದು ಕೂಗುತ್ತಿದ್ದರು. ಕಾರಿನಿಂದ ಡಿಕೆಶಿ ಕೆಳಗಿಳಿಯುತ್ತಿದ್ದಂತೆ ಪುರಸಭೆ ಸದಸ್ಯ ಹಾಗೂ ಕೈ ಮುಖಂಡ ಅಲ್ಲಾವುದ್ದೀನ್ ಮನಿಯಾರ್ ಡಿಕೆಶಿ ಅವರ ಹೆಗಲ ಮೇಲೆ ಕೈ ಹಾಕಿ ಅವರನ್ನು ಇಳಿಸಿಕೊಳ್ಳಲು ನೆರವಾಗಲು ಮುಂದಾಗಿದ್ದಾರೆ.
ತಮ್ಮ ಹೆಗಲ ಮೇಲೆ ಕೈಹಾಕಿದ ಕಾರ್ಯಕರ್ತನನ್ನು ನೋಡಿ ಕೆರಳಿದ ಡಿಕೆಶಿ ತಕ್ಷಣವೇ ಅಲ್ಲಾವುದ್ದೀನ್ ಮನಿಯಾರಗೆ ಕಪಾಳಕ್ಕೆ ಬಾರಿಸಿದ್ದಾರೆ.
ಡಿಕೆಶಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದೀಗ ಈ ಘಟನೆ ಕುರಿತು ಪರ ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಒಟ್ಟಾರೆ ಚುನಾವಣೆ ಹೊತ್ತಲ್ಲಿ ಈ ಘಟನೆ ಯಾವ ಪರಿಣಾಮ ಉಂಟು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.