ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮುಲು ವಿಚಾರದಲ್ಲಿ ನಾನು ಯಾರಿಗೂ ಚಾಡಿ ಹೇಳಿಲ್ಲ, ಅದರ ಅವಶ್ಯಕತೆ ನನಗೆ ಇಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸಂಡೂರು ಉಪಚುನಾವಣೆ ಸೋಲಿನ ವಿಚಾರದಲ್ಲಿ ಬಿಜೆಪಿ ನಾಯಕರ ಮೇಲೆ ಶ್ರೀರಾಮುಲು ಮುನಿಸಿಕೊಂಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮೇಲೆ ರಾಮುಲು ಸಿಡಿದೆದ್ದಿದ್ದು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲೂ ಶ್ರೀರಾಮುಲು ಗರಂ ಆಗಿದ್ದಾರೆ.
ಇತ್ತ ಶ್ರೀರಾಮುಲು ಅವರ ರಾಜೀನಾಮೆ ಹೇಳಿಕೆಗೆ ಜನಾರ್ದನ ರೆಡ್ಡಿ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಟಿ ನಡೆಸಿದ ಜನಾರ್ದನ ರೆಡ್ಡಿ ನೇರವಾಗಿ ಶ್ರೀರಾಮುಲು ಅವರು ಪಕ್ಷ ಬಿಟ್ಟು ಹೋಗೋದಾದ್ರೆ ಹೋಗಲಿ. ಆದರೆ ಶ್ರೀರಾಮುಲು ನನ್ನ ಮೇಲೆ ಆರೋಪ ಮಾಡೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ.
ಶ್ರೀರಾಮುಲುರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆದೊಯ್ಯೋ ಪ್ರಯತ್ನ ನಡೆದಿದೆ. ಸಚಿವ ಸತೀಶ್ ಜಾರಕಿಹೊಳಿ ಸೋಲಿಸಲು ಡಿಸಿಎಂ ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ರಾಮುಲು ಮೂಲಕ ಜಾರಕಿಹೊಳಿ ಸೋಲಿಸಲು ಡಿಕೆಶಿ ಮುಂದಾಗಿದ್ದಾರೆ ಅನ್ನೋ ಮಾತು ಕೇಳಿದ್ದೇನೆ ಎಂದು ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.
ಶ್ರೀರಾಮುಲು ನನಗೆ ಯಾವತ್ತೂ ಸ್ನೇಹಿತನಾಗೇ ಇರುತ್ತಾರೆ. ಒಮ್ಮೆ ನಾನು ಸ್ನೇಹಿತ ಅಂತ ಭಾವಿಸಿದ ಮೇಲೆ ಬದಲಾಯಿಸಲ್ಲ. ಸತೀಶ್ ಜಾರಕಿಹೊಳಿನ ಮಣಿಸಲು ಡಿಕೆಶಿ ಪ್ಲಾನ್ ಮಾಡುತ್ತಿದ್ದಾರೆ. ಸತೀಶ್ ಜಾರಕಿಹೊಳಿ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಹೀಗಾಗಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೆಳೆಯಲು ಡಿಕೆಶಿ ಪ್ರಯತ್ನಿಸಿದ್ದಾರೆ ಎಂದಿದ್ದಾರೆ.