ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡಾಗಿನಿಂದ ಟೈಮೇ ಸರಿ ಇಲ್ಲ. ಅವರ ಕಾಲ್ಗುಣದಿಂದ ರಾಜ್ಯದಲ್ಲಿ ಬರಗಾಲ ಆವರಿಸಿದೆ ಎಂದು ಆರ್. ಅಶೋಕ್ ಟಾಂಗ್ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದು 1 ತಿಂಗಳು ಆಗಿದೆ ಆಡಳಿತದಲ್ಲಿ ಏನು ಬದಲಾವಣೆ ಆಗಿದೆ? ಅದೇ ಭ್ರಷ್ಟಾಚಾರ ಹಳೇ ಬಾಟಲಿ ಹೊಸ ಮದ್ಯ ತರ ಆಗಿದೆ. ಡಿಕೆ ಶಿವಕುಮಾರ್ ಅಧಿಕಾರಕ್ಕೇರಿದ ಕಾಲ್ಗುಣನೇ ಏನೋ ಅವರು ಅಧಿಕಾರಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರಿಗೆ ಬೆಳೆಗಳನ್ನು ಬೆಳೆಯಬೇಡಿ ಅಂತೀರಿ… ನಿನಗೆ ಧೈರ್ಯ ಇದ್ದರೆ ತಮಿಳುನಾಡಿನಲ್ಲಿ ಹೇಳು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಮೇಕೆದಾಟು ಮಾಡೋಕೆ ಬಿಡಲ್ಲ ಎಂದು ತಮಿಳುನಾಡು ಸಿಎಂ ವಿಜಯ್ ಹೇಳ್ತಿದ್ದಾರೆ. ನಮ್ಮ ಸಿಎಂ ಅಧಿಕಾರಕ್ಕೆ ಬಂದು ತಿಂಗಳು ಆಯ್ತು. ಏನಾದರೂ ಅದಕ್ಕೆ ಪ್ರತಿಯಾಗಿ ಒಂದು ನಿರ್ಣಯ ಮಾಡಿದ್ರಾ? ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡ್ತಿದ್ದಾರೆ. ನೀರಾವರಿ ಸಚಿವರು ಬೆಂಗಳೂರು ಬಿಟ್ಟು ಆಚೆ ಹೋಗಲ್ಲ ಎಂದಿದ್ದಾರೆ.
ತುಂಗಭದ್ರಾ ಜಲಾಶಯ ಕ್ರಸ್ಟ್ಗೇಟ್ ಉದ್ಘಾಟನೆಗೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಬಂದಿದ್ರು. ಆದರೆ ನಮ್ಮ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮಕ್ಕೆ ಹೋಗೇ ಇಲ್ಲ. ಹತ್ತೇ ದಿನಗಳಲ್ಲಿ ಪೂರ್ತಿ ಸಚಿವ ಸಂಪುಟ ಅಂದ್ರು. ಒಂದು ತಿಂಗಳು ಆದರೂ ಸಂಪುಟ ಪೂರ್ಣ ಇಲ್ಲ. ಬೆಳೆ ಬೆಳೆಯಬೇಡಿ ಅಂತೀಯಾ ಆದರೆ ಬೆಳೆಗೆ ಪರಿಹಾರ ಏನು ಕೊಡ್ತೀಯಾ? ಯಾವುದಾದರೂ ಒಬ್ಬ ಮಂತ್ರಿ ಒಂದು ವೀಕ್ಷಣೆಗೆ ಹೋಗಿದ್ದೀರಾ? ಎಂದು ಪ್ರಶ್ನೆ ಮಾಡಿದರು.



