ಹೊಸದಿಗಂತ ವರದಿ, ಮಂಗಳೂರು:
ಯಕ್ಷಗಾನ ಹಿರಿಯ ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಭಾಗಮಂಡಲ ಅವರು ಯಕ್ಷಗಾನ ಪ್ರದರ್ಶನವೊಂದಕ್ಕೆ ತೆರಳುತ್ತಿದ್ದಾಗ ಸುಳ್ಯ ಸಂಪಾಜೆ ಬಳಿ ಇತ್ತೀಚೆಗೆ ನಡೆದ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಮಂಗಳೂರು ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸಾ ವೆಚ್ಚ ಭರಿಸಲು ದಾನಿಗಳ ನೆರವು ಕೋರಿದ್ದಾರೆ.
ಅಪಘಾತದಲ್ಲಿ ಮಹಾಬಲೇಶ್ವರ ಭಟ್ ಅವರ ಎದೆ ಹಾಗೂ ಎಡಕಾಲಿಗೆ ಗಂಭೀರ ಗಾಯವಾಗಿದೆ. ಎಡಕಾಲಿನ ಮೂಳೆ ಮುರಿತ ಉಂಟಾಗಿದೆ. ಗುದ್ದಿದ ರಭಸಕ್ಕೆ ಶ್ವಾಸಕೋಶಕ್ಕೂ ಪೆಟ್ಟಾಗಿದೆ. ವೈದ್ಯರು ಈಗಾಗಲೇ ಕಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಎದೆ ಹಾಗೂ ಶ್ವಾಸಕೋಶದ ಸಮಸ್ಯೆಗೆ ಚಿಕಿತ್ಸೆ ನಡೆಯುತ್ತಿದೆ. ಆರಂಭದಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಹೆಚ್ಚಿನ ಚಿಕಿತ್ಸೆಯನ್ನು ಮಂಗಳೂರು ನರ್ಸಿಂಗ್ ಹೋಂನಲ್ಲಿ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಅಂದಾಜು ವೆಚ್ಚ ಎರಡು ಲಕ್ಷ ರೂ.ಆಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. 62 ವರ್ಷ ಪ್ರಾಯದ ಮಹಾಬಲೇಶ್ವರ ಭಟ್ ಅವರು ಯಕ್ಷಗಾನವನ್ನು ನಂಬಿ ಜೀವನ ನಡೆಸುತ್ತಿದ್ದು, ಪ್ರಸ್ತುತ ವಿವಿಧ ಮೇಳ ಹಾಗೂ ಸಂಘ ಸಂಸ್ಥೆಗಳ ಯಕ್ಷಗಾನ ಪ್ರದರ್ಶನಕ್ಕೆ ಕಲಾವಿದರಾಗಿ ತೆರಳುತ್ತಿದ್ದರು. ದಿಢೀರ್ ಆಗಿ ಉಂಟಾದ ಅಪಘಾತದಿಂದ ಆರ್ಥಿಕ ಸಂಕಷ್ಟದಲ್ಲಿರುವ ಅವರ ಬಡ ಕುಟುಂಬ ಕಂಗಾಲಾಗಿದೆ. ಧರ್ಮಸ್ಥಳ, ಕಟೀಲು, ಕದ್ರಿ, ಮಧೂರು ಮುಂತಾದ ಮೇಳಗಳಲ್ಲಿ 41 ವರ್ಷಗಳ ಕಾಲ ತಿರುಗಾಟ ನಡೆಸಿದ ಅವರು, ಇದೀಗ ತನ್ನ ಚಿಕಿತ್ಸೆಯ ವೆಚ್ಚ ಭರಿಸಲು ದಾನಿಗಳ ನೆರವು ಕೋರಿದ್ದಾರೆ.
ನೆರವಿಗಾಗಿ:
ಬ್ಯಾಂಕ್: ಬ್ಯಾಂಕ್ ಆಫ್ ಬರೋಡಾ
ಶಾಖೆ: ಸುಂಕದಕಟ್ಟೆ
ಹೆಸರು: ಮಹಾಬಲ ಭಟ್
ಖಾತೆ ಸಂಖ್ಯೆ: 68610100002065
ಐಎಫ್ಎಸ್ಸಿ ಕೋಡ್:BARBOVJSKAT
ಎಂಐಸಿಆರ್ ಕೋಡ್: 671012005
ಹೆಚ್ಚಿನ ಮಾಹಿತಿಗೆ ದೂರವಾಣಿ 9449568218 ಸಂಪರ್ಕಿಸಬಹುದು.