ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ರೇವಾರಿ ಜಿಲ್ಲೆಯ ಧರುಹೇರಾ ಎಂಬಲ್ಲಿ ಕಳ್ಳನೊಬ್ಬ ಹನುಮಂತನ ದೇವಸ್ಥಾನವನ್ನು ಕೊಳ್ಳೆ ಹೊಡೆದಿದ್ದಾನೆ. ದೇಗುಲದಲ್ಲಿದ್ದ ಕಾಣಿಕೆ ಡಬ್ಬವನ್ನು ಒಡೆದು ಸುಮಾರು 5 ಸಾವಿರ ರೂಪಾಯಿಯನ್ನು ಕೊಂಡೊಯ್ದಿದ್ದಾನೆ.
ಆದರೆ ಆತ ಅಷ್ಟು ಮಾಡಿದ್ದರೆ ಈಗ ಸುದ್ದಿಯಾಗುತ್ತಿರಲಿಲ್ಲ… ಬದಲಾಗಿ ಆತ ಡಬ್ಬ ದೋಚುವುದಕ್ಕೂ ಮೊದಲು ದೇವಸ್ಥಾನದಲ್ಲಿ ಗರ್ಭಗುಡಿಯ ಎದುರು ಕುಳಿತು ಹನುಮಾನ್ ಚಾಲೀಸಾ ಪಠಣ ಮಾಡಿ (Recites Hanuman Chalisa), 10 ರೂಪಾಯಿ ತಪ್ಪು ಕಾಣಿಕೆ ಹಾಕಿದ್ದಾನೆ.
ಆಂಜನೇಯನ ಮೂರ್ತಿ ಎದುರು ಕುಳಿತು ಹನುಮಾನ್ ಚಾಲೀಸಾ ಪಠಿಸಿರುವ ದೃಶ್ಯ ದೇಗುಲದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೆಲ ನಿಮಿಷಗಳ ಕಾಲ ಕಣ್ಣುಮುಚ್ಚಿಕೊಂಡು, ಕೈಮುಗಿದು ಕುಳಿತುಕೊಂಡು ಹನುಮಾನ್ ಚಾಲೀಸಾ ಪಠಿಸಿ. ಬಳಿಕ ಆಂಜನೇಯನ ಮೂರ್ತಿಯ ಕಾಲ ಬಳಿ 10 ರೂಪಾಯಿಯನ್ನು ಇಟ್ಟು ಬಳಿಕ ಕಾಣಿಕೆ ಡಬ್ಬಕ್ಕೆ ಹಾಕಿದ್ದ ಬೀಗವನ್ನು ಒಡೆದು, ಅದರಲ್ಲಿದ್ದ ಅಷ್ಟೂ ನೋಟುಗಳನ್ನೂ ಕೊಂಡೊಯ್ದಿದ್ದಾನೆ.