ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರವಾನಗಿ ಇಲ್ಲದ ಅಕ್ರಮ ಬಂದೂಕು ಹಾಗೂ ಶಸ್ತ್ರಾಸ್ತ್ರಗಳನ್ನು ನವೆಂಬರ್ 1ರೊಳಗೆ ಸರ್ಕಾರಕ್ಕೆ ತಂದು ಒಪ್ಪಿಸಿಬಿಡಿ. ಸ್ವಯಂಪ್ರೇರಿತವಾಗಿ ಬಂದು ಶರಣಾದರೆ ಯಾವುದೇ ಪ್ರಕರಣ ಹಾಕಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಂದೂಕು ಅಗತ್ಯವಿದ್ದರೆ ಪರವಾನಗಿ ಪಡೆಯಿರಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಬಂದೂಕುಗಳಿಂದ ಹಲವು ಅರಣ್ಯ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಹಾಗೂ ಜಾನುವಾರುಗಳ ರಕ್ಷಣೆಗಾಗಿ ಬಂದೂಕು ಅಗತ್ಯವಿದ್ದರೆ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎಂದು ಸಲಹೆ ನೀಡಿದರು. ತಮ್ಮ ಕ್ಷೇತ್ರದಲ್ಲಿ ಈ ಹಿಂದೆ 300ಕ್ಕೂ ಹೆಚ್ಚು ನಾಡ ಬಂದೂಕುಗಳನ್ನು ಸರ್ಕಾರಕ್ಕೆ ಒಪ್ಪಿಸಲಾಗಿತ್ತು. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಅಕ್ರಮ ಬಂದೂಕುಗಳಿರುವ ಮಾಹಿತಿ ಸರ್ಕಾರಕ್ಕೆ ಇದೆ ಎಂದರು.
ಇದನ್ನೂ ಓದಿ:
ಕಸ್ತೂರಿರಂಗನ್ ವರದಿ ಬಗ್ಗೆ ಏನಂದ್ರು?
ಕಸ್ತೂರಿರಂಗನ್ ವರದಿ ಕುರಿತು ಮಾತನಾಡಿದ ಅವರು, ಮಂಗಳೂರಿಗೆ ಭೇಟಿ ನೀಡಿದ ಬಳಿಕ 3-4 ಜಿಲ್ಲೆಗಳಿಗೆ ತೆರಳಿ ರೈತರನ್ನು ಭೇಟಿಯಾಗುವುದಾಗಿ ಹೇಳಿದರು. ರೈತರ ಸಮಸ್ಯೆ, ಬರ ಹಾಗೂ ಕಸ್ತೂರಿರಂಗನ್ ವರದಿ ಕುರಿತು ವಿಶೇಷ ಅಧಿವೇಶನ ಕರೆಯಲಾಗಿದೆ. ಕರ್ನಾಟಕದ ವನ್ಯಜೀವಿ ಸಂಪತ್ತು ಸಮೃದ್ಧವಾಗಿದ್ದು, ಅರಣ್ಯ ಮತ್ತು ಹಸಿರಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದರು.
ತೇಗದ ಸಿರಿ ಯೋಜನೆಯಿಂದ ಲಾಭ
ತೇಗದ ಸಿರಿ ಯೋಜನೆಯಿಂದ ರೈತರಿಗೆ ಹೆಚ್ಚಿನ ಲಾಭವಾಗಲಿದ್ದು, ಯೋಜನೆ ಯಶಸ್ವಿಯಾಗಲು ಅರಣ್ಯ ಇಲಾಖೆ ಶ್ರಮಿಸಬೇಕು ಎಂದರು. ನಗರ ಪ್ರದೇಶಗಳಲ್ಲಿನ ಅರಣ್ಯ ಇಲಾಖೆಯ ಜಾಗದಲ್ಲಿ ಟ್ರೀ ಪಾರ್ಕ್ಗಳನ್ನು ನಿರ್ಮಿಸಿ ನಗರದ ಹಸಿರು ವಲಯ ಹೆಚ್ಚಿಸುವ ಉದ್ದೇಶವಿದೆ ಎಂದು ತಿಳಿಸಿದರು.



