ಹೊಸದಿಗಂತ ವರದಿ ಕಾರವಾರ:
ಎರಡನೆಯ ಮದುವೆ ಸಿದ್ಧತೆಯಲ್ಲಿದ್ದ ಆಯುರ್ವೇದ ವೈದ್ಯರೋರ್ವರು ಧಾರುಣವಾಗಿ ಕೊಲೆಯಾದ ಘಟನೆ ಜಿಲ್ಲೆಯ ಶಿರಸಿ ತಾಲೂಕಿನ ಕೆ.ಎಚ್.ಬಿ ಕಾಲನಿಯಲ್ಲಿ ನಡೆದಿದೆ.
ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದ್ದ ವೈದ್ಯ ರಮೇಶ ಕಲ್ಗುಟ್ಕರ್ (51) ಮೃತ ವ್ಯಕ್ತಿಯಾಗಿದ್ದು ಇವರ ಪತ್ನಿ ಐದು ತಿಂಗಳ ಹಿಂದೆ ಮೃತಷಟ್ಟಿರುವುದರಿಂದ ಪತ್ನಿಯ ಸಹೋದರಿಯೊಂದಿಗೆ ಎರಡನೆಯ ಮದುವೆಗೆ ಸಿದ್ಧತೆ ನಡೆದಿತ್ತು.
ಸೋಮವಾರ ಶಿರಸಿ ಮಂಜಗುಣಿಯ ವೆಂಕಟರಮಣ ದೇವಾಲಯದಲ್ಲಿ ವೈದ್ಯರ ಎರಡನೇ ಮದುವೆ ಸರಳವಾಗಿ
ನಡೆಯುವುದಿತ್ತು. ಮದುವೆ ಸಂಬಂಧಿಸಿದಂತೆ ಭಾನುವಾರ ಸಂಜೆ ಅವರ ಮನೆಗೆ ಆಗಮಿಸಿದ್ದ ಸಂಬಂಧಿಗಳು ಬಾಗಿಲು ಮುಚ್ಚಿದ ಸ್ಥಿತಿಯಲ್ಲಿರುವ ಕಾರಣ ವೈದ್ಯರನ್ನು ಹಲವು ಬಾರಿ ಕೂಗಿ ಕರೆದರೂ ಬಾಗಿಲು ತೆರೆಯದಿರುವ ಕಾರಣ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ವೈದ್ಯರು ರಕ್ತದ ಮಡುವಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಮದುವೆಗೆ ಕೆಲವು ಗಂಟೆಗಳಷ್ಟೇ ಬಾಕಿ ಇರುವಾಗ ನಡೆದಿರುವ ಘಟನೆಯಿಂದ ವೈದ್ಯರ ಸಂಬಂಧಿಗಳು ಆತಂಕಗೊಂಡಿದ್ದಾರೆ.
ಮೃತ ವೈದ್ಯರಿಗೆ ಇಬ್ಬರು ಗಂಡು ಮಕ್ಕಳಿದ್ದು ಒಬ್ಬ ಪಶ್ಚಿಮ ಬಂಗಾಳದಲ್ಲಿ ವೈದ್ಯರಾಗಿ ಸೇವೆಯಲ್ಲಿದ್ದರೆ ಇನ್ನೊಬ್ಬ ಬೆಂಗಳೂರಿನಲ್ಲಿ ಇಂಜನಿಯರಿಂಗ್ ವ್ಯಾಸಂಗ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ದೀಪನ್. ಎನ್.ಎಂ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವೈದ್ಯರ ಹತ್ಯೆ ಕೃತ್ಯ ನಡೆಸಿದವರ ಪತ್ತೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ದಾರೆ.
ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



