ಹೊಸದಿಗಂತ ವರದಿ ಅಂಕೋಲಾ:
ಕೇಂದ್ರ ಸರ್ಕಾರದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯಿಂದ ಸುಮಾರು 14.5 ಲಕ್ಷ ರೂಪಾಯಿ ಪಡೆದು ವಂಚಿಸಿದ ವಂಚಕರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಂಬೈ ನಿವಾಸಿಗಳಾದ ಗೌರೀಶ ಸಂತೋಷ ಬಾಂದೇಕರ ಮತ್ತು ಪ್ರೇಮಕುಮಾರ ಸೋಲಂಕಿ ಹಣ ಪಡೆದು ವಂಚಿಸಿದ ಆರೋಪಿಗಳು.
ಅಂಕೋಲಾ ಕಾಕರಮಠ ವಿಠೋಬ ದೇವಾಲಯದ ಸಮೀಪದ ನಿವಾಸಿ ವಿಶಾಲ ವಿವೇಕಾನಂದ ನಾರ್ವೇಕರ್ ಎನ್ನುವವರಿಂದ ಅವರ ಪತ್ನಿಗೆ ಕೇಂದ್ರ ಸರ್ಕಾರದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿರುವುದಾಗಿ ತಿಳಿದು ಬಂದಿದೆ. 2019 ರ ನವೆಂಬರ್ 8 ರಿಂದ 2020 ರ ಜುಲೈ 6 ರ ವರೆಗೆ ಹಂತ ಹಂತವಾಗಿ ಗೌರೀಶ ಬಾಂದೇಕರ ಅವರ ಆಕ್ಸಿಸ್ ಬ್ಯಾಂಕ್ ಖಾತೆಗೆ 9.5 ಲಕ್ಷ ಮತ್ತು ಪ್ರೇಮಕುಮಾರ ಸೋಲಂಕಿಯ ಕೋಟೆಕ್ ಮಹೇಂದ್ರ ಬ್ಯಾಂಕ್ ಖಾತೆಗೆ 5 ಲಕ್ಷ ರೂಪಾಯಿ ಜಮಾ ಮಾಡಿರುವುದಾಗಿ ತಿಳಿದು ಬಂದಿದೆ.
ಹಣ ಪಡೆದ ಆರೋಪಿಗಳು ಉದ್ಯೋಗ ಕೊಡಿಸದೇ, ಹಣವನ್ನು ಮರಳಿ ನೀಡದೇ ಇರುವ ಕುರಿತು ವಿಚಾರಿಸಿದಾಗ ವಿಶಾಲ ನಾರ್ವೇಕರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಅಂಕೋಲಾ ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.