ಹೊಸದಿಗಂತ ವರದಿ ಗದಗ :
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಾವನ ಮನೆಗೆ ಆಗಮಿಸಿದ್ದ ಅಳಿಯ ತನ್ನ ಹೆಂಡತಿ ಹಾಗೂ ಆರು ವರ್ಷದ ಮಗನಿಗೆ ಚಾಕುವಿನಿಂದ ಇರಿದ ಘಟನೆ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ನಡೆದಿದೆ.
ಮಧ್ಯರಾತ್ರಿ ಗೋವಾದಿಂದ ಮಾವನ ಮನೆಗೆ ಬಂದಿದ್ದ ಅಳಿಯ ರಾಕ್ಷಸಿಕೃತ್ಯ ಎಸಗಿದ್ದು, ಗಾಯಾಳು ತಾಯಿ, ಮಗುವನ್ನು ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಕು ಇರಿದ ಮುರಳಿ ಪೂಜಾರ್ (32) ಎಂಬಾತನನ್ನ ಮರಕ್ಕೆ ಕಟ್ಟಿಹಾಕಿದ್ದ ಗ್ರಾಮಸ್ಥರು ಶುಕ್ರವಾರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಅಲ್ಲಿ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದನು. ಇದರಿಂದ ಬೇಸತ್ತ ಅತನ ಹೆಂಡತಿ ಸಕ್ಕುಬಾಯಿ ತನ್ನ ಮಗುವಿನೊಂದಿಗೆ ಡೋಣಿ ತಾಂಡಾದಲ್ಲಿನ ತವರು ಮನೆಗೆ ಬಂದಿದ್ದಳು. ಗುರುವಾರ ರಾಜಿ ಪಂಚಾಯತಿಯಲ್ಲಿ ಮುರಳಿ ಹಾಗೂ ಸಕ್ಕುಬಾಯಿ ಅವರನ್ನು ಒಂದು ಮಾಡುವದಕ್ಕೆ ಹಿರಿಯರು ಮುಂದಾಗಿದ್ದರು.ಅಲ್ಲದೆ, ಶುಕ್ರವಾರ ಬೆಳಗ್ಗೆ ಅಳಿಯನೊಂದಿಗೆ ಗೋವಾಕ್ಕೆ ಕಳಿಸುವದಕ್ಕೆ ನಿರ್ಧಾರವನ್ನೂ ಮಾಡಿದ್ದರು.ಆದರೆ, ಏಕಾ ಏಕಿ ಗುರುವಾರ ಮಧ್ಯರಾತ್ರಿ ಬಂದಿದ್ದ ಅಳಿಯ ಸಕ್ಕುಬಾಯಿ, ಶಿವಂ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.