ಹೊಸದಿಗಂತ ವರದಿ ಕಲಬುರಗಿ:
ಚುನಾವಣೆಗಳಲ್ಲಿ ಆಸೆ, ಆಮೀಷಗಳಿಗೆ ಒಳಗಾಗದೇ, ಪ್ರಾಮಾಣಿಕರಿಗೆ ಮತ ನೀಡುವಂತೆ ರಾಮನಗರ ಶಾಸಕ ಅನಿತಾ ಕುಮಾರಸ್ವಾಮಿ ಹೇಳಿದರು. ಶುಕ್ರವಾರ ಜಿಲ್ಲೆಯ ಆಳಂದ ತಾಲೂಕಿನ ಶ್ರೀ ರಾಮ ಮಾಕೇ೯ಟ್,ನ ಆವರಣದಲ್ಲಿ ನಡೆದ ಜೆಡಿಎಸ್ ಬೃಹತ್ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಮಹಿಳೆಯರ ಬಗ್ಗೆ ವಿಶೇಷ ಕಾಳಜಿಯನ್ನು ಹೊತ್ತು,ಮಹಿಳಾ ಮೀಸಲಾತಿ ಮಾಡಿದ್ದು ಜೆಡಿಎಸ್ ಪಕ್ಷ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಅತೀ ಹೆಚ್ಚು ಮಹಿಳೆಯರಿಗೆ ಅವಕಾಶ ನೀಡಿ ಸ್ಥಾನಮಾನ ಕೊಟ್ಟಿದ್ದು ಇದೇ ದೇವೆಗೌಡರ ಜೆಡಿಎಸ್ ಪಕ್ಷವೆಂದು ಬಣ್ಣಿಸಿದರು.
ಮುಂಬರುವ ದಿನಗಳಲ್ಲಿ ಪಂಚರತ್ನ ಯೋಜನೆ,ನೀರಾವರಿ ಯೋಜನೆ ಸೇರಿದಂತೆ ಜನಸಾಮಾನ್ಯರ ಜೀವನಕ್ಕೆ ಅವಶ್ಯಕತೆ ಇರುವ ಹಲವು ಯೋಜನೆಗಳನ್ನು ಕುಮಾರಸ್ವಾಮಿ ಅವರು ಹಾಕಿಕೊಂಡಿದ್ದು,ಅವರ ಕೈ ಬಲಪಡಿಸಲು ಆಳಂದ ಅಭ್ಯರ್ಥಿ ಮಹೇಶ್ವರಿ ವಾಲಿ ಅವರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಯುವಕರ ಜೊತೆ ಜೊತೆಗೆ ಮಹಿಳೆಯರಿಗೂ ಉದ್ಯೋಗ ಅವಕಾಶ ಕಲ್ಪಿಸುವ ಯೋಜನೆಯನ್ನು ಕುಮಾರಸ್ವಾಮಿ ಅವರು ರೂಪಿಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ಎರಡು ಅವಧಿಯಲ್ಲಿ ಭ್ರಷ್ಟಾಚಾರರಹಿತ ಆಡಳಿತ ನೀಡಿ,ರೈತರ ಸಾಲಮನ್ನಾ ಮಾಡಿದ್ದಾರೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆ ನೀಡುವ ಸಂಕಲ್ಪ ಕುಮಾರಸ್ವಾಮಿ ಅವರು ಮಾಡಿದ್ದು,ಅವರಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.