ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ನಳ್ಳಿ ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡಕ್ಕೆ ಶಾಕ್ ಮೇಲೆ ಶಾಕ್ ಕಾದಿದೆ. ಲಖನೌ ತಂಡದ ಇಬ್ಬರು ಭಾರತದ ಪ್ರಮುಖ ಆಟಗಾರರು ಐಪಿಎಲ್ 2023ನಿಂದ ಹೊರಗುಳಿಯಲಿದ್ದಾರೆ.
ಆರ್ಸಿಬಿ ತಂಡದ ಪಂದ್ಯದ ವೇಳೆ ಗಂಭೀರವಾದ ಗಾಯಕ್ಕೆ ಒಳಗಾಗಿದ್ದ ನಾಯಕ ಕೆ.ಎಲ್. ರಾಹುಲ್ ಪ್ರಸ್ತುತ ಐಪಿಎಲ್ನಿಂದಲೇ ಔಟಾಗಿದ್ದಾರೆ. ತೊಡೆಯ ಗಾಯಕ್ಕೆ ಒಳಗಾದ ನಂತರ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಇನ್ನು ಮುಂದೆ ಭಾಗವಹಿಸುವುದಿಲ್ಲ ಎಂದು ವರದಿಯಾಗಿದೆ. ಅಲ್ಲದೆ ಲಖನೌ ಸೂಪರ್ ಜೈಂಟ್ಸ್ ತಂಡದ ಅನುಭವಿ ವೇಗಿ ಜಯದೇವ್ ಉನದ್ಕತ್ ಅವರ ಭುಜದ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಕೂಡ ಐಪಿಎಲ್ನಿಂದ ಹೊರಗುಳಿದಿದ್ದಾರೆ .
ಇದರ ನಡುವೆ ಜೂನ್ 7 ರಿಂದ 11 ರವರೆಗೆ ಲಂಡನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡುವುದು ಸಹ ಡೌಟ್ ಎಂದು ಹೇಳಲಾಗುತ್ತಿದೆ. ಆದರೂ, ಹಿರಿಯ ಬ್ಯಾಟರ್-ಕೀಪರ್ ರಾಹುಲ್ ಅವರನ್ನು ಆ ವೇಳೆಗೆ ತಂಡಕ್ಕೆ ಲಭ್ಯವಿರುವಂತೆ ಸಿದ್ಧಗೊಳಿಸಲು ಬಿಸಿಸಿಐ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡಕ್ಕೆ ಸೂಚಿಸಲಾಗಿದೆ. ಹಾಗೂ, ಜಯದೇವ್ ಉನದ್ಕತ್ ಕೂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅನುಮಾನ ಎಂದು ವರದಿಯಾಗಿದೆ.
ಕೆ.ಎಲ್. ರಾಹುಲ್ ಪ್ರಸ್ತು ಲಖನೌ ತಂಡದೊಂದಿಗೆ ಇದ್ದಾರೆ. ಆದರೆ ಅವರು ಬುಧವಾರ ಸಿಎಸ್ಕೆ ವಿರುದ್ಧದ ಪಂದ್ಯವನ್ನು ವೀಕ್ಷಿಸಿದ ನಂತರ ಗುರುವಾರ ಶಿಬಿರದಿಂದ ನಿರ್ಗಮಿಸುತ್ತಿದ್ದಾರೆ. ಮುಂಬೈನಲ್ಲಿ ಬಿಸಿಸಿಐ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯದಲ್ಲಿ ರಾಹುಲ್ಗೆ ಸ್ಕ್ಯಾನಿಂಗ್ ಮಾಡಲಾಗುತ್ತದೆ ಎಂದೂ ತಿಳಿದುಬಂದಿದೆ. ಅವರ ಹಾಗೂ ಜಯದೇವ್ ಉನದ್ಕತ್ ಪ್ರಕರಣವನ್ನು ಬಿಸಿಸಿಐ ನಿರ್ವಹಿಸುತ್ತದೆ ಎಂದು ಬಿಸಿಸಿಐನ ಹಿರಿಯ ಮೂಲವು ತಿಳಿಸಿದ್ದಾರೆ.