ಹೊಸದಿಗಂತ ಡಿಜಿಟಲ್ ಡೆಸ್ಕ್:
ಬದಿಯಡ್ಕದ ದಂತ ವೈದ್ಯ ಡಾ. ಕೃಷ್ಣಮೂರ್ತಿ ಸರ್ಪಂಗಳ ಸಾವಿನ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿರುವ ಪೊಲೀಸ್ ಇಲಾಖೆ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ವೈದ್ಯರ ಸಾವಿನ ಹಿಂದಿರುವ ನಿಗೂಢತೆ ಬೇಧಿಸಲು ಬದಿಯಡ್ಕ ಹಾಗೂ ಕುಂದಾಪುರ ಪೊಲೀಸರು ಜೊತೆಯಾಗಿದ್ದು, ಬದಿಯಡ್ಕಕ್ಕೆ ಆಗಮಿಸಿರುವ ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ ಅವರ ನೇತೃತ್ವದ ಮೂವರು ಅಧಿಕಾರಿಗಳ ತಂಡ ಈ ಭಾಗದಲ್ಲಿ ಸಮಗ್ರ ಮಾಹಿತಿ ಕಲೆಹಾಕುತ್ತಿದೆ.
ವಿವಿಧ ಪ್ರದೇಶಗಳ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಈ ಬಗ್ಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಸಿಐ ಗೋಪಿಕೃಷ್ಣ, ತನಿಖಾ ತಂಡದ ಪಿಎಸ್ಐಗಳಾದ ಪವನ್, ಶ್ರೀಧರ ನಾಯ್ಕ್, ಪ್ರಸಾದ್ ನೇತೃತ್ವದ ತಂಡ ಡಾ. ಕೃಷ್ಣಮೂರ್ತಿಯವರ ಮೃತದೇಹ ಪತ್ತೆಯಾದ ಕುಂದಾಪುರ ಬಳಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆ ಪರಿಸರದ ರೈಲು ಹಳಿಯಲ್ಲಿ ಕೂಡಾ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದೆ.
ಬಹಳಷ್ಟು ಚರ್ಚೆಗೆ ಗ್ರಾಸವಾಗಿರುವ ಈ ಪ್ರಕರಣವನ್ನು ಶೀಘ್ರವೇ ಬೇಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.