ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಎಸ್.ಎಂ. ಕೃಷ್ಣ ಅವರು ಡಾ. ರಾಜ್ಕುಮಾರ್ ಅಪಹರಣದ ವೇಳೆ ಸಿಎಂ ಆಗಿದ್ದರು. ಆ ಸಮಯದಲ್ಲಿ ತುಂಬಾ ಕಷ್ಟಪಟ್ಟಿದ್ದರು. ನಿದ್ದೆಗೆಟ್ಟು ಒತ್ತಡದಲ್ಲಿ ದಿನ ಕಳೆಯುತ್ತಿದ್ದರು ಎನ್ನುವ ವಿಷಯ ಇದೀಗ ಬೆಳಕಿಗೆ ಬಂದಿದೆ.
ರಾಜ್ಕುಮಾರ್ ಅವರನ್ನು ಅಪರಹರಣ ಮಾಡಿದ್ದು ಕಾಡುಗಳ್ಳ ವೀರಪ್ಪನ್. ಇದು ಆ ಸಂದರ್ಭದಲ್ಲಿ ದೊಡ್ಡ ಸುದ್ದಿ ಆಗಿತ್ತು. ಖ್ಯಾತ ನಾಮರೊಬ್ಬರನ್ನು ಅಷ್ಟು ಸುಲಭದಲ್ಲಿ ಅಪಹರಣ ಮಾಡಿಕೊಂಡು ಹೋದರು ಎಂಬ ವಿಚಾರ ರಾಜ್ಯ ಸರ್ಕಾರಕ್ಕೆ ತೀವ್ರವಾಗಿ ಮುಜುಗರ ತಂದಿತ್ತು. ಅವರು ಮರಳದಿದ್ದರೆ ಮುಂದೇನು ಎನ್ನುವ ಭಯ ಎಸ್ಎಂ ಕೃಷ್ಣ ಅವರನ್ನು ಬಹುವಾಗಿ ಕಾಡಿತ್ತು. 108 ದಿನ ಅವರು ಸರಿಯಾಗಿ ನಿದ್ದೆ ಮಾಡದೆ ಒದ್ದಾಡಿದ್ದರು. ರಾಜ್ಕುಮಾರ್ ಮರಳಿದ ಬಳಿಕ ಕೃಷ್ಣ ನಿಟ್ಟುಸಿರು ಬಿಟ್ಟರು.
ರಾಜ್ಕುಮಾರ್ ಅವರ ಅಭಿಮಾನಿ ಬಳಗ ದೊಡ್ಡದಿದೆ. ಕೃಷ್ಣ ಅವರು ಕೂಡ ಅಣ್ಣಾವ್ರ ಅಭಿಮಾನಿ. ಅವರಿಗೆ ಏನಾದರೂ ಆದರೆ ಅಭಿಮಾನಿಗಳು ಸುಮ್ಮನೆ ಇರುವುದಿಲ್ಲ ಎಂಬುದು ಕೃಷ್ಣ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಇನ್ನು ಬೆಂಗಳೂರಲ್ಲಿ ತಮಿಳಿಗರ ಸಂಖ್ಯೆ ಕೂಡ ದೊಡ್ಡದಿದೆ. ರಾಜ್ಕುಮಾರ್ಗೆ ಹಾನಿ ಆದರೆ ಬೆಂಗಳೂರಲ್ಲಿ ಕನ್ನಡಿಗರು ಹಾಗೂ ತಮಿಳಿಗರ ಮಧ್ಯೆ ಗಲಭೆ ಆದರೆ ಎನ್ನುವ ಭಯ ಕಾಡಿತ್ತು.
ರಾಜ್ಕುಮಾರ್ ಸುಮಾರು 108 ದಿನ ಕಾಡಿನಲ್ಲಿ ಇದ್ದರು. ಬಂಧನಕ್ಕೆ ಒಳಗಾದ ವಿಚಾರವನ್ನು ಪಾರ್ವತಮ್ಮ ಅವರು ಕೃಷ್ಣಗೆ ಹೇಳಿದ್ದರು. ಆ ಸಂದರ್ಭದಲ್ಲಿ ಪಾರ್ವತಮ್ಮ ಮೈಸೂರಿನಲ್ಲಿ ಇದ್ದರು. ನಂತರ ಪಾರ್ವತಮ್ಮ ಅವರು ಬೆಂಗಳೂರಿಗೆ ಬಂದು ಮಾಹಿತಿ ನೀಡಿದರು.
ನಂತರ ನಿರಂತರ ಪ್ರಯತ್ನದಿಂದ ಅವರನ್ನು ಕರೆದುಕೊಂಡು ಬರಲಾಯಿತು. ಆ ಬಳಿಕ ರಾಜ್ಯದಲ್ಲಿ ಸಂಭ್ರಮ ಮನೆ ಮಾಡಿತ್ತು. ರಾಜ್ಕುಮಾರ್ ಅವರನ್ನು ಕರೆತರಲು ಕೃಷ್ಣ ಅವರು ಸಾಕಷ್ಟು ಶ್ರಮ ಹಾಕಿದ್ದರು. ತಮಿಳುನಾಡಿಗೆ ತೆರಳಿ ಅಲ್ಲಿನ ನಾಯಕರಾದ ಜಯಲಲಿತಾ, ಕರುಣಾನಿಧಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಪದೇ ಪದೇ ಒತ್ತಾಯ ಮಾಡುತ್ತಿದ್ದರು.