ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯದ ಅಮಲೇರಿದ ವ್ಯಕ್ತಿ ವಿದ್ಯುತ್ ಕಂಬದ ಲೈನ್ ಏರಿ ನೇತಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿಯೊಬ್ಬರು ಕಂಬ ಏರಿ ವಿದ್ಯುತ್ ತಂತಿ ಹಿಡಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಕಾಲದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅದಿಲಾಬಾದ್ ಜಿಲ್ಲೆಯ ಮಾವಳ ಪೊಲೀಸ್ ಠಾಣಾ ವ್ಯಾಪ್ತಿಯ ಕೆಆರ್ಕೆ ಕಾಲೋನಿಯ ಟ್ರ್ಯಾಕ್ಟರ್ ಚಾಲಕ ಬಾಲು ಅಲಿಯಾಸ್ ಪ್ರವೀಣ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಕುಡಿದ ಅಮಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾಲೋನಿಯಲ್ಲಿದ್ದ ವಿದ್ಯುತ್ ಕಂಬ ಏರಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ.
ವಿದ್ಯುತ್ ತಂತಿಗೆ ನೇತಾಡುತ್ತಿದ್ದವನನ್ನು ಸ್ಥಳೀಯರು ಕೆಳಗಿಳಸಲು ಸತತ ಪ್ರಯತ್ನಪಟ್ಟರೂ ಫಲ ನೀಡಲಿಲ್ಲ. ಸ್ವಲ್ಪ ಸಮಯದ ನಂತರ ಆತನೇ ಕೆಳಗಿಳಿದು ಬಂದಿದ್ದು, ಗಾಯಗೊಂಡ ಚಾಲಕನನ್ನು ಚಿಕಿತ್ಸೆಗಾಗಿ ರಿಮ್ಸ್ಗೆ ದಾಖಲಿಸಿದರು.