ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದ ಜನತೆ ತತ್ತರಿಸಿದ್ದಾರೆ. ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ರಾಜ್ಯದ ಜನತೆ, ಬೆಲೆ ಏರಿಕೆ, ಸುಂಕ ಏರಿಕೆ ಬಿಸಿಯಿಂದ ತತ್ತರಿಸುವಂತಾಗಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಬೆಲೆ ಏರಿಕೆ, ಬರ, ಅಬಕಾರಿ ಸುಂಕ ಹೆಚ್ಚಳ, ನೋಂದಣಿ ಶುಲ್ಕಹೆಚ್ಚಳದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಅಭಿವೃದ್ಧಿ ಮರೀಚಿಕೆಯಾಗಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ ಎಂದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯವನ್ನು ಬರ ಪರಿಸ್ಥಿತಿ ಕಾಡುತ್ತಿದೆ. ಇದು ಅವರ ಕಾಲ್ಗುಣವೂ ಆಗಿರಬಹುದು. ಈ ಹಿಂದೆಯೂ ಕಾಂಗ್ರೆಸ್ ಅಕಾರದಲ್ಲಿದ್ದಾಗ ರಾಜ್ಯವನ್ನು ಬರ ಕಾಡಿತ್ತು ಎಂದು ಸಿ.ಟಿ.ರವಿ ಲೇವಡಿ ಮಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗೊಂದಲದ ಗೂಡಾಗಿದೆ. ಒಂದೆಡೆ ಬಿ.ಕೆ.ಹರಿಪ್ರಸಾದ್ ಅವರು ಪರೋಕ್ಷವಾಗಿ ಸಿದ್ದರಾಮಯ್ಯನವರನ್ನೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಇದರ ಹಿಂದೆ ಡಿ.ಕೆ.ಶಿವಕುಮಾರ್ ಅವರ ಬೃಹತ್ ಯೋಜನೆಯೂ ಇರಬಹುದು. ಒಂದೆಡ್ಡೆ ರಾಜಣ್ಣ ಅವರು ಮೂರು ಮಂದಿ ಡಿಸಿಎಂಗಳು ಬೇಕು ಎಂದು ಹೇಳಿದ್ದಾರೆ. ಇವೆಲ್ಲವೂ ಈಗಿನ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸಿದೆ ಎಂದು ಸಿ.ಟಿ.ರವಿ ಹೇಳಿದರು.
ಸಿದ್ದರಾಮಯ್ಯನವರು ಮನುಸ್ಮೃತಿ ಜಾರಿ ಹುನ್ನಾರ ನಡೆದಿದೆ ಎಂದಿದ್ದಾರೆ. ಬಿಜೆಪಿ ಎಲ್ಲೂ ಈ ಬಗ್ಗೆ ಹೇಳಿಲ್ಲ. ಸಿಎಂ ಜನತೆಯ ಹಾದಿ ತಪ್ಪಿಸುವ ಹಾದಿಯಲ್ಲಿದ್ದಾರೆ. ತಮ್ಮ ಹೇಳಿಕೆಗೆ ಅವರು ಸರಿಯಾದ ಆಧಾರ ನೀಡಬೇಕು. ಇಲ್ಲದಿದ್ದರೆ ಸುಳ್ಳು ಹೇಳಿದಂತಾಗುತ್ತದೆ. ಸುಳ್ಳು ಸುದ್ದಿಗಳ ಬಗ್ಗೆ ಸುಮೊಟೊ ಹಾಕಬೇಕು ಎನ್ನುವ ಅವರ ಮೇಲೆಯೇ ಪೊಲೀಸರು ಕೇಸು ದಾಖಲಿಸಿ ಫ್ಯಾಕ್ಟ್ ಚೆಕ್ ಮಾಡಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.