ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲು ಸಿಎಂ ನೀರು ಬಿಡಲ್ಲ ಅಂದ್ರು, ಆಮೇಲೆ ನೀರು ಬಿಡ್ತೀವಿ ಅಂತಾರೆ. ಇದು ಊಸರವಳ್ಳಿ ಸರ್ಕಾರ ಅಂತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು (Cauvery Water) ಬಿಡುವ ವಿಚಾರದಲ್ಲಿ ತಮಿಳುನಾಡಿನ (Tamil Nadu) ಪ್ರಭಾವ ರಾಜ್ಯ ಸರ್ಕಾರದ ಮೇಲೆ ಇದ್ದಂಗೆ ಇದೆ. ಹಾಗಾಗಿ ಸುಪ್ರೀಂ ಕೋರ್ಟ್ ನಲ್ಲಿ (Supreme Court) ವಿಚಾರಣೆ ಆಗಿಲ್ಲ. ಅದಕ್ಕಿಂತ ಮುಂಚೇನೇ ಇವರು ನೀರು ಬಿಡ್ತಾರೆ. ಇದರಿಂದ ಕಾವೇರಿ ಜಲಾನಯನ ಜನರಿಗೆ ಮೋಸ ಮಾಡಿದಂತೆ ಆಗುತ್ತೆ. ಸರ್ವಪಕ್ಷ ಸಭೆಯಲ್ಲಿ ನಮ್ಮಲ್ಲೇ ನೀರಿಲ್ಲ ಅಂತ ಹೇಳಿದ್ರು. ಆಗಾಗ್ಗೆ ತನ್ನ ನಿರ್ಧಾರ ಬದಲಾವಣೆ ಮಾಡಿಕೊಳ್ಳುತ್ತಿದೆ. ನಿಜವಾಗಿಯೂ ತಾಕತ್, ಧಮ್ ಇದ್ರೆ ನೀರು ಬಿಡ್ತಿರಲಿಲ್ಲ. ತಾಕತ್, ಧಮ್ ಇದ್ರೆ ಸುಪ್ರೀಂ ಕೋರ್ಟ್ ಮುಂದೆ ನೀರು ಬೀಡಲ್ಲ ಎಂಬ ವಾದ ಮಂಡಿಸಲಿ ಎಂದು ಸವಾಲ್ ಹಾಕಿದ್ದಾರೆ.
ಕಾವೇರಿ ವಿಚಾರದಲ್ಲಿ ಯಾವ ಸರ್ಕಾರವೂ ಈ ರೀತಿಯಾಗಿ ನಡೆದುಕೊಂಡಿಲ್ಲ. ಈ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ ಆಗುವ ಪ್ರಶ್ನೆಯೇ ಇಲ್ಲ. ಏಕೆಂದರೆ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ರೀತಿಯ ಹೇಳಿಕೆ ಕೊಡ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸುಪ್ರೀಂನಲ್ಲಿ ಕೇಸ್ ಇರುವಾಗ ಪ್ರಧಾನಿ ಹೇಗೆ ಎಂಟ್ರಿ ಆಗೋಕೆ ಆಗುತ್ತೆ? ಮನಮೋಹನ್ ಸಿಂಗ್ ಇದ್ದಾಗಲೂ ವಿವಾದ ಇತ್ತು. ಮನಮೋಹನ್ ಸಿಂಗ್ ಮಧ್ಯಪ್ರವೇಶ ಮಾಡಿದ್ರಾ? ಮಾಡೋದಕ್ಕೆ ಆಗುತ್ತಾ? ಗೊತ್ತಿದ್ದರೂ ರಾಜ್ಯ ಸರ್ಕಾರ, ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ಕಾವೇರಿ ಕೊಳ್ಳದ ಮಕ್ಕಳಿಗೂ ಸರ್ಕಾರದ ಹಣೆಬರಹ ಗೊತ್ತಿದೆ. ತಮಿಳುನಾಡಿನ ಪ್ರಭಾವಕ್ಕೆ ಮಣಿದು ನೀರು ಬಿಟ್ಟಿದ್ದು ಆಘಾತಕಾರಿ ವಿಚಾರ. ಇದರ ವಿರುದ್ಧ ತೀವ್ರವಾದ ಪ್ರತಿಭಟನೆ ನಮ್ಮ ಪಕ್ಷ ಮಾಡುತ್ತೆ. ಬಿಜೆಪಿಯಿಂದ ಕಾವೇರಿ ರಕ್ಷಣೆಯಾತ್ರೆ ಇನ್ನೆರಡು ದಿನಗಳಲ್ಲಿ ಫೈನಲ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.