ಹೊಸದಿಗಂತ ವರದಿ,ಮಡಿಕೇರಿ:
ಕೊಡಗು ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ವೀರಾಜಪೇಟೆ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 8 ಮಂದಿಯನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರ ತಂಡ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಡಿಸಿಆರ್ಬಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು.
ಅದರಂತೆ ಶುಕ್ರವಾರ (ಫೆ.24) ರಂದು ವೀರಾಜಪೇಟೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಜಿ ಗ್ರಾಮದ ಜಂಕ್ಷನ್ ಬಳಿ ಮಾರುತಿ ಓಮಿನಿ ಕಾರಿನಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುವ ಕುರಿತು ದೊರೆತ ಖಚಿತ ಮಾಹಿತಿ ಹಿನ್ನಲೆಯಲ್ಲಿ ಆ ವಾಹನವನ್ನು ತಪಾಸಣೆ ನಡೆಸಿದಾಗ ವೀರಾಜಪೇಟೆ ನಗರ ನಿವಾಸಿಗಳಾದ ಸಾದಿಕ್ ಪಾಷ (33)ಖಲೀಲ್ ( 37) ಇಲಿಯಾಸ್ ಅಹಮ್ಮದ್ (44) ಹಾಗೂ ಹಾಕತ್ತೂರು ನಿವಾಸಿ ದರ್ಶನ್ (27) ಎಂಬವರುಗಳನ್ನು 2.5 ಕೆ.ಜಿ ಗಾಂಜಾದೊಂದಿಗೆ ಬಂಧಿಸಲಾಗಿದೆ.
ಅದೇ ರೀತಿ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಿಗೆ ಕಟ್ಟೆ ಬಸ್ ತಂಗುದಾಣದ ಬಳಿ ನಾಲ್ಕು ಮಂದಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ದೊರಕಿದ ಮೇರೆಗೆ ಡಿಸಿಆರ್ಬಿ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣಾ ಅಧಿಕಾರಿ, ಸಿಬ್ಬಂದಿಗಳ ತಂಡದವರು ದಾಳಿ ನಡೆಸಿ ಹಾಕತ್ತೂರು ಗ್ರಾಮದ ನಿವಾಸಿ ಕರಣ್ ಕುಮಾರ್( 27 ) ಮೂರ್ನಾಡು ನಿವಾಸಿ ಗಗನ್ (26) ಕುಶಾಲನಗರ ನಿವಾಸಿ ನಿರೂಪ್.ಎಸ್, (27) ಹಾಗೂ ವಿನಯ್ ಅವರುಗಳನ್ನು 2.5 ಕೆ.ಜಿ ಗಾಂಜಾದೊಂದಿಗೆ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರು ತಿಳಿಸಿದ್ದಾರೆ.