ಹೊಸದಿಗಂತ ವರದಿ ಕೊಡಗು :
ಬಟ್ಟೆ ವ್ಯಾಪಾರಿಯೊಬ್ಬರು ನೇಣು ಬಿಹಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ನಾಪೋಕ್ಲು ಪಟ್ಟಣದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಎಚ್.ಕೆ ಸಂದೀಪ್ (40) ಆತ್ಮಹತ್ಯೆಗೆ ಶರಣಾದ ಬಟ್ಟೆ ವ್ಯಾಪಾರಿ. ಮೂಲತಃ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ಹಡ್ಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಸಂದೀಪ್, ಕಳೆದ 20 ವರ್ಷಗಳಿಂದ ನಾಪೋಕ್ಲುವಿನಲ್ಲಿ ಆರ್.ಎಚ್. ಬಟ್ಟೆ ಮಳಿಗೆ ನಡೆಸುತ್ತಿದ್ದರಲ್ಲದೆ, ನಾಪೋಕ್ಲು ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.
ಶುಕ್ರವಾರ ಬೆಳಗ್ಗೆ 7.30ಕ್ಕೆ ಸ್ನೇಹಿತ ಸಂದೇಶ್ ಎಂಬವರಿಗೆ ಕರೆ ಮಾಡಿ 9 ಗಂಟೆಗೆ ಮನೆಗೆ ಬರುವಂತೆ ತಿಳಿಸಿದ್ದ ಸಂದೀಪ್, ಸಂದೇಶ್ ಮನೆಗೆ ತೆರಳಿದಾಗ ಸಂದೀಪ್ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ.
ಬಳಿಕ ಸಂದೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರಿಂದ ವ್ಯಾಪಾರ ಸ್ಥಗಿತಗೊಳಿಸಿದ್ದ ಸಂದೀಪ್, ಜೀವನ ಸಾಗಿಸುವುದಕ್ಕೂ ಕಷ್ಟಪಡುತ್ತಿದ್ದರೆನ್ನಲಾಗಿದ್ದು, ಆತ್ಮಹತ್ಯೆಗೂ ಇದೇ ಕಾರಣವಿರಬಹುದೆಂದು ಶಂಕಿಸಲಾಗಿದೆ.