ಬಂಟ‌ ಸಮಾಜದ ನವೀಕೃತ ಶಾಂತಿಧಾಮ ಹಸ್ತಾಂತರ

ಮಡಿಕೇರಿ:

ನವೀಕರಣಗೊಂಡಿರುವ ಕೊಡಗು ಜಿಲ್ಲಾ ಬಂಟರ ಶಾಂತಿಧಾಮವನ್ನು ‘ಶಾಂತಿ ಧಾಮ ನಿರ್ವಹಣಾ ಸಮಿತಿ’ಗೆ ಹಸ್ತಾಂತರಿಸಲಾಯಿತು.
ನಗರದ ಸ್ಟೋನ್ ಹಿಲ್‍ನಲ್ಲಿರುವ ಶಾಂತಿ ಧಾಮದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ ಕೊರಗಪ್ಪ ರೈ, ಜಯಕೃಷ್ಣ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಐತಪ್ಪ ರೈ ಅವರುಗಳು ಶಾಂತಿ ಧಾಮ ನಿರ್ವಹಣಾ ಸಮಿತಿಯ ಎಚ್. ಪ್ರಭಾಕರ್ ರೈ, ಶೇಷಪ್ಪ(ಪುಟ್ಟು) ರೈ, ಅರುಣ್ ಶೆಟ್ಟಿ ಅವರಿಗೆ ದಾಖಲಾತಿ ಪುಸ್ತಕ ಹಾಗೂ ರಶೀದಿ ಪುಸ್ತಕವನ್ನು ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಕೊರಗಪ್ಪ ರೈ, ಶಾಂತಿ ಧಾಮವನ್ನು ನವೀಕರಣಗೊಳಿಸಿ ಸ್ವಚ್ಛಂದವಾಗಿಸಬೇಕೆಂಬುದು ಹಲವು ವರ್ಷಗಳ ಕನಸಾಗಿತ್ತು. ಜಗದೀಶ್ ರೈ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನದಲ್ಲಿ ಅದು ಈಡೇರಿದೆ. ಮುಂದೆ ಇದರ ನಿರ್ವಹಣೆಗೆ ಸಮಾಜದ ಎಲ್ಲರೂ ಸಹಕಾರ ನೀಡಬೇಕೆಂದರು.
ಬಂಟ ಸಮಾಜ ಸಾಮಾಜಿಕವಾಗಿ ಹಿಂದೆ ಇದೆ. ಮುಂದಿನ ದಿನದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದವರನ್ನು ಮುನ್ನೆಲೆಗೆ ತರಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಂಘಟನಾತ್ಮಕ ವಿಚಾರದಲ್ಲಿ ಆಸಕ್ತಿ ವಹಿಸಬೇಕೆಂದು ಕಿವಿಮಾತು ಹೇಳಿದರು.

ಬಿ.ಬಿ. ಐತಪ್ಪ ರೈ ಮಾತನಾಡಿ, ಬಂಟರ ಶಾಂತಿ ಧಾಮ ನಿರ್ಮಾಣಕ್ಕೆ ಕಾರಣಕರ್ತರಾದವರ ಶ್ರಮವನ್ನು ಸದಾ ಸ್ಮರಿಸಿಕೊಳ್ಳಬೇಕೆಂದರು. ಉಪಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಸ್ಮಶಾನ ಜಾಗಕ್ಕಾಗಿ ದಶಕದ ಹಿಂದೆ ಸಾಕಷ್ಟು ಶ್ರಮಿಸಿದ್ದೇವೆ. ದಾನಿಗಳ ನೆರವಿನಿಂದ ಚಿತಾಗಾರವನ್ನು ನಿರ್ಮಿಸಲಾಗಿತ್ತು. ಮುಂದೆ ಯುವಕರು ಇವುಗಳನ್ನು ಉತ್ತಮ ಸ್ಥಿತಿಯಲ್ಲಿ ಕೊಂಡೊಯ್ಯಲು ಶ್ರಮಿಸಬೇಕು. ಬಂಟರ ಭವನ ನಿರ್ಮಾಣ ವಿಚಾರದಲ್ಲೂ ಎಲ್ಲರೂ ಆಸಕ್ತಿಯಿಂದ ಶ್ರಮಿಸಬೇಕೆಂದರು ಹೇಳಿದರು.

ಕಾರ್ಯದರ್ಶಿ ರವೀಂದ್ರ ವಿ. ರೈ ಮಾತನಾಡಿ, ಶಾಂತಿ ಧಾಮ ನವೀಕರಣಕ್ಕೆ ಜಿಲ್ಲಾಧ್ಯಕ್ಷ ಜಗದೀಶ್ ರೈ ಯಾವುದೇ ಫಲಾಪೇಕ್ಷೆಯಿಲ್ಲದೆ ಶ್ರಮಿಸಿದ್ದಾರೆ. ಸ್ವಂತ ಹಣದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಶ್ರೇಷ್ಠ ಕಾರ್ಯ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಿ.ಡಿ. ಜಗದೀಶ್ ರೈ ಮಾತನಾಡಿ, ಈ ಹಿಂದೆ ಸ್ಮಶಾನಕ್ಕೆ ಬಂದವರು ಅಭಿವೃದ್ಧಿ ಬಗ್ಗೆ ಸಲಹೆ ನೀಡುತ್ತಿದ್ದರು. ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ಆರಂಭದಲ್ಲೇ ಈ ಕಾರ್ಯವನ್ನು ಮಾಡಬೇಕೆಂದು ಪಣ ತೊಟ್ಟಿದ್ದೆ. ಅದರಂತೆ ಸಂಘ ಹಾಗೂ ಎಲ್ಲರ ಸಹಕಾರದಿಂದ ಇಂದು ಉತ್ತಮ ಶಾಂತಿ ಧಾಮವಾಗಿ ರೂಪುಗೊಂಡಿದೆ. ಮುಂದಿನ ದಿನದಲ್ಲಿ ಈ ಜಾಗದಲ್ಲಿ ಉತ್ತಮ ರೀತಿಯ ಉದ್ಯಾನ ನಿರ್ಮಾಣ ಮಾಡಲಾಗುವುದು. ಆ ಸಂದರ್ಭವೂ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!