– ಮಂಜುನಾಥ ಗಂಗಾವತಿ
ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಆವರಿಸಿದ ಬರ ಹಿನ್ನೆಲೆ ಸಾಲದ ಸುಳಿಯಿಂದ ಹೊರಬರಲಾರದೇ ರೈತರು ಆತ್ಮಹತ್ಯೆ ಶರಣಾಗುತ್ತಿದ್ದು, ಪ್ರಸಕ್ತ ವರ್ಷ ಏಪ್ರಿಲ್ನಿಂದ ಈವರೆಗೆ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 273 ರೈತರು ಉತ್ತರ ಕರ್ನಾಟಕದವರಾಗಿದ್ದಾರೆ!
ರಾಜ್ಯದಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿ, ಸಾಲದ ಹೊರೆ ರೈತರನ್ನು ಕಂಗಾಲಾಗಿಸಿದೆ. ಅದರಲ್ಲೂ ಹಾವೇರಿ, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಶಿವಮೊಗ್ಗ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅನ್ನದಾತರು ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ 456 ರೈತರ ಪೈಕಿ ಉತ್ತರ ಕರ್ನಾಟಕ 13 ಜಿಲ್ಲೆಗಳಲ್ಲಿ 273 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿಯಲ್ಲಿ 62 ಹಾಗೂ ಬೆಳಗಾವಿಯಲ್ಲಿ 56 ಸಾವು ಸಂಭವಿಸಿದ್ದು, ಮೊದಲೆರಡು ಸ್ಥಾನ ಈ ಜಿಲ್ಲೆಗಳು ಈ ಪಡೆದಿವೆ. ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಉಡುಪಿಯಲ್ಲಿ ಯಾವ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. 2023-24 ನೇ ಸಾಲಿನಲ್ಲಿ ಉಪವಿಭಾಗಾಧಿಕಾರಿಗಳ ಸಮಿತಿಯಲ್ಲಿ 354 ರೈತರ ಆತ್ಮಹತ್ಯೆ ಪರಿಹಾರಕ್ಕೆ ಅರ್ಹವೆಂದು ತೀರ್ಮಾನಿಸಿದೆ. ಈ ಪೈಕಿ 321 ನೀಡಲಾಗಿದೆ. 33 ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಪಾವತಿಸಲು ಬಾಕಿ ಇದೆ ಎಂದು ಸರ್ಕಾರದ ಅಂಕಿ- ಅಂಶ ಪ್ರಕರಣಗಳಿಗೆ ಪರಿಹಾರ ದೃಢಪಡಿಸಿವೆ.
ಯಾವ ವರ್ಷ ಎಷ್ಟು ರೈತರು ಆತ್ಮಹತ್ಯೆ:
- 2013-14ರಲ್ಲಿ 89,
- 2014-15ರಲ್ಲಿ 117,
- 2015-16ರಲ್ಲಿ 1525,
- 2016-17ರಲ್ಲಿ 1203,
- 2017-18ರಲ್ಲಿ 1232,
- 2018-19ರಲ್ಲಿ 1084,
- 2019-2020ರಲ್ಲಿ 1091,
- 2020-21ರಲ್ಲಿ 851,
- 2021-22ರಲ್ಲಿ 859,
- 2022-23ರಲ್ಲಿ 849
- 2023 ಏಪ್ರಿಲ್ ನಿಂದ ಈವರೆಗೆ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ 82.95 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಇದರಲ್ಲಿ 46 ಲಕ್ಷ ಕೃಷಿ ಹಾಗೂ 2 ಲಕ್ಷ ತೋಟಗಾರಿಕೆ ಬೆಳೆ ನಾಶವಾಗಿದೆ. ರೈತರು ಬೆಳೆ ನಾಶದಿಂದ ಕೆಂಗೆಟ್ಟಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಆತ್ಮಹತ್ಯೆ?
ಬಾಗಲಕೋಟೆ 11, ಬಳ್ಳಾರಿ 8, ಬೆಂಗಳೂರು (ನ) ಹಾಗೂ ದ.ಕ.ದಲ್ಲಿ ತಲಾ 1, ಬೆಳಗಾವಿ 56, ಬೀದರ್ 12, ಚಿಕ್ಕಮಗಳೂರು 49, ಚಿತ್ರದುರ್ಗ ಮತ್ತು ದಾವಣಗೆರೆ 7, ಧಾರವಾಡ 27, ಗದಗ 10, ಹಾಸನ 17, ಹಾವೇರಿ 62, ಕಲಬುರಗಿ 16, ಕೊಡಗು 2, ಕೊಪ್ಪಳ 6, ಮಂಡ್ಯ 14, ಮೈಸೂರು 30, ರಾಯಚೂರು ಮತ್ತು ರಾಮನಗರ ತಲಾ 4, ಶಿವಮೊಗ್ಗ 32, ತುಮಕೂರು 12, ವಿಜಯಪುರ 25, ವಿಜಯನಗರ 18, ಯಾದಗಿರಿ 16 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.