ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ ವುಡ್ ನಟ, ನಿರ್ದೇಶಕ ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ನೆಲಮಂಗಲ ಹತ್ತಿರದ ಹರ್ಷಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಯುಐ’ ಚಿತ್ರೀಕರಣದ ವೇಳೆ ಉಪೇಂದ್ರ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಇದೀಗ ಉಪೇಂದ್ರ ಸುಧಾರಿಸಿಕೊಂಡಿದ್ದು, ಕೆಲ ಹೊತ್ತು ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ. ನಂತರ ಮತ್ತೆ ಶೂಟಿಂಗ್ ಸ್ಥಳಕ್ಕೆ ಬಂದು, ಎಂದಿನಂತೆ ಕೆಲಸದಲ್ಲಿ ತೊಡಗಿದ್ದಾರೆ. ಚಿತ್ರೀಕರಣದ ಸ್ಥಳದಿಂದಲೇ ಫೇಸ್ ಬುಕ್ ಲೈವ್ಗೆ ಬಂದ ಉಪೇಂದ್ರ, ‘ನಾನು ಶೂಟಿಂಗ್ ಸ್ಪಾಟ್ ನಲ್ಲಿ ಇದ್ದೇನೆ. ಆರೋಗ್ಯವಾಗಿದ್ದೇನೆ. ಯಾರೂ ಆತಂಕ ಪಡಬೇಕಿಲ್ಲ. ಇದೀಗ ಚಿತ್ರೀಕರಣದಲ್ಲಿ ಮತ್ತೆ ತೊಡಗಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.
ನೆಲಮಂಗಲದ ಮೋಹನ್ ಬಿ ಕೆರೆ ಸ್ಡುಡಿಯೋದಲ್ಲಿ ನಡೆಯುತ್ತಿದ್ದ ‘ಯುಐ ‘ ಚಿತ್ರೀಕರಣದಲ್ಲಿ ಸ್ಮೋಕ್ ಎಫೆಕ್ಟ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿತ್ತು. ದಟ್ಟ ಹೊಗೆಯಲ್ಲಿ ಚಿತ್ರೀಕರಣದ ನಡೆಯುತ್ತಿರೋದ್ರಿಂದ ಕೆಮ್ಮು ತೀವ್ರವಾಗಿ ಉಸಿರಾಟದ ಸಮಸ್ಯೆ ಎದುರಾಗಿತ್ತು ಎಂದು ಹೇಳಲಾಗುತ್ತಿದೆ.