ಹೊಸದಿಗಂತ ವರದಿ, ಕುಶಾಲನಗರ:
ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಅವರು ಜಿಲ್ಲೆಗೆ ಅಗಮಿಸುವ ಸಂದರ್ಭ ಕೊಡಗಿನ ಗಡಿ ಭಾಗದ ತೊರೆನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಯ ಮಕ್ಕಳ ಕಲಿಕೆಯ ಬಗ್ಗೆ ಮತ್ತು ಶಾಲೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದ ಸಚಿವರು, ಶಾಲಾ ಮಕ್ಕಳ ಹಾಜುರಾತಿ ಪರಿಶೀಲಿಸಿ ಗೈರುಹಾಜರಾದ ಮಕ್ಕಳನ್ನು ಕರೆತರುವಂತೆ ಸೂಚಿಸಿದರು.
ಶಾಲಾ ಸಭಾಂಗಣವನ್ನು ವೀಕ್ಷಿಸಿದ ನಂತರ ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಸಚಿವರು ಈಗಾಗಲೇ ಬೀಳುವ ಹಂತದಲ್ಲಿರುವ ಹಳೆಯ ಶಾಲೆಯ ಕಟ್ಟಡವನ್ನು ವೀಕ್ಷಿಸಿದರು.
ಮಕ್ಕಳ ಪೋಷಕರೊಂದಿಗೆ ಮಾತನಾಡಿ ಮಕ್ಕಳನ್ನು ಶಾಲೆ ಕರೆತರುವಂತೆ ಶಿಕ್ಷಕರಿಗೆ ಸೂಚನೆ ನೀಡಿದರು. ಅಲ್ಲದೆ ಶೈಕ್ಷಣಿಕ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಂಗದಾಮಯ್ಯ, ತಾಲೂಕು ಶಿಕ್ಷಣಾಧಿಕಾರಿ ಕೆ ವಿ ಸುರೇಶ್, ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ ಮಹೇಶ್, ಸಹಕಾರ ಸಂಘದ ನಿರ್ದೇಶಕ ಟಿ. ಕೆ.ಪಾಂಡುರಂಗ, ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ರವಿಚಂದ್ರ, ಪ್ರೌಢಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಣ್ಣಯ್ಯ, ಶಾಲಾ ಮುಖ್ಯೋಪಾಧ್ಯಾಯನಿ ಕಾಮಾಕ್ಷಿ, ಸಹ ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು