ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕೀಯ ಹೈಡ್ರಾಮಾ ಮುಂದುವರಿದಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಮತ್ತು ಕೇಂದ್ರ ಪಡೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ತಮ್ಮ ಪಕ್ಷದ ಎಣಿಕೆಯ ಏಜೆಂಟ್ಗಳು ಮತ್ತು ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಎಣಿಕೆ ಕೇಂದ್ರವನ್ನು ಬಿಟ್ಟು ಹೊರಬರದಂತೆ ಎಚ್ಚರಿಕೆ ನೀಡಿದ್ದಾರೆ.
“ಇದು ಬಿಜೆಪಿಯ ವ್ಯವಸ್ಥಿತ ಸಂಚು” ಎಂದು ಮಮತಾ ಹೇಳಿದ್ದಾರೆ. “ಮೊದಲ ಸುತ್ತಿನಲ್ಲಿ ಬಿಜೆಪಿಯವರು ಮುನ್ನಡೆ ಸಾಧಿಸಿದಂತೆ ತೋರಿಸುವುದು ಅವರ ಪ್ಲಾನ್. ಇದರಿಂದ ವಿರೋಧ ಪಕ್ಷದ ಏಜೆಂಟ್ಗಳು ಧೃತಿಗೆಟ್ಟು ಕೇಂದ್ರದಿಂದ ಹೊರಬರಲಿ ಎಂಬುದು ಅವರ ಆಶಯ. ಆದರೆ ನಮ್ಮವರು ಎಚ್ಚರದಿಂದ ಇರಬೇಕು” ಎಂದು ಅವರು ತಿಳಿಸಿದ್ದಾರೆ.
ಕಲ್ಯಾಣಿ ಸೇರಿದಂತೆ ಹಲವು ಭಾಗಗಳಲ್ಲಿ ಮತಯಂತ್ರಗಳಲ್ಲಿ ವ್ಯತ್ಯಯ ಕಂಡುಬಂದಿದೆ ಮತ್ತು ಸರಿಯಾದ ಹೊಂದಾಣಿಕೆ ಆಗುತ್ತಿಲ್ಲ ಎಂದು ಮಮತಾ ದೂರಿದ್ದಾರೆ. ಅಲ್ಲದೆ, ಕೇಂದ್ರ ಪಡೆಗಳು ತೃಣಮೂಲ ಕಾಂಗ್ರೆಸ್ ಮೇಲೆ ದಬ್ಬಾಳಿಕೆ ನಡೆಸುತ್ತಿವೆ ಮತ್ತು ಎಸ್ಐಆರ್ ಮೂಲಕ ಮತಗಳನ್ನು ಕದಿಯುವ ಪ್ರಯತ್ನ ನಡೆದಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಇಷ್ಟೆಲ್ಲಾ ಸವಾಲುಗಳ ನಡುವೆಯೂ ತೃಣಮೂಲ ಕಾಂಗ್ರೆಸ್ 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾವುದೇ ಅಕ್ರಮಗಳಿಗೆ ಬಲಿಯಾಗದೆ, ಅಂತಿಮ ಫಲಿತಾಂಶ ಬರುವವರೆಗೂ ಎಣಿಕೆ ಕೇಂದ್ರದಲ್ಲೇ ಉಳಿಯಲು ಅವರು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.



