ಹೊಸದಿಗಂತ ವರದಿ ಬಳ್ಳಾರಿ:
ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾನುವಾರ ವಿದ್ಯುತ್ ಅವಘಡ ಸಂಭವಿಸಿ 5 ಜನರು ಗಾಯಗೊಂಡ ಘಟನೆ ತಾಲೂಕಿನ ಮೋಕಾ ಗ್ರಾಮದಲ್ಲಿ ನಡೆದಿದೆ.ಮೋಕಾ ಗ್ರಾ.ಪಂ.ಅಧ್ಯಕ್ಷ ರಾಮಣ್ಣ, ದೊಡ್ಡಪ್ಪ, ಮೋಕಾ ಪಂಪಣ್ಣ, ಸಂತೋಷ್ ಸ್ವಾಮೀ, ಸೇರಿ ಐದು ಜನರಿಗೆ ಗಾಯಗಳಾಗಿದ್ದು, ಮೋಕಾ ಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಮೀಪದ ಸಂಗನಕಲ್ ಗ್ರಾಮದ ಹೊರವಲಯದಿಂದ ಮೋಕಾ ಗ್ರಾಮಕ್ಕೆ ರಾಹುಲ್ ಗಾಂಧಿಯವರ ಪಾದಯಾತ್ರೆ ಮುಂದುವರೆಯಿತು. ಮೊಕಾ ಗ್ರಾಮದಲ್ಲಿ ಸಂಚರಿಸುವಾಗ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಜೈಕಾರ ಕೂಗುತ್ತಿದ್ದರು, ಈ ವೇಳೆ ಅತಿ ಎತ್ತರದ ಕಬ್ಬಿಣದ ರಾಡ್ ಗೆ ಧ್ವಜ ಕಟ್ಟಿ ಮುಂದೆ ಸಾಗುವಾಗ ಮೇಲೆ ವಿದ್ಯುತ್ ತಂತಿ ತಗುಲಿದೆ, ಕೂಡಲೇ ಅದನ್ನು ಕೈಬಿಟ್ಟು ಮುಂದೆ ಹೋದಾಗ ಸ್ಥಳದಲ್ಲಿದ್ದವರ ಮೇಲೆ ಬಿದ್ದಿದೆ. ವಿದ್ಯುತ್ ಸ್ಪರ್ಷಿಸಿ ಐದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕೂಡಲೇ ಅವರನ್ನು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹತ್ತಿರದ ಮೋಕಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ಭೇಟಿ:
ವಿದ್ಯುತ್ ಸ್ಪರ್ಷಿಸಿ ಗಾಂಯಗೊಂಡವರನ್ನು ರಾಹುಲ್ ಗಾಂಧಿ ಅವರು ಮೋಕಾ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ, ಧೈರ್ಯತುಂಬಿದರು. ಪ್ರಾಥಮಿಕ ಚಿಕಿತ್ಸೆ ಕಲ್ಪಿಸಲಾಗುತ್ತಿದೆ, ಅಗತ್ಯ ಬಿದ್ದರೇ ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಗುವುದು, ಯಾವುದೇ ಕಾರಣಕ್ಕೂ ಆತಂಕಬೇಡ ಎಂದು ಗಾಯಗೊಂಡವರಿಗೆ ಧೈರ್ಯ ತುಂಬಿದರು. ನಂತರ ಎಲ್ಲ ಗಾಯಾಳುಗಳಿಗೆ ರಾಹುಲ್ ಗಾಂದಿ ಅವರು ವ್ಯಯಕ್ತಿಕವಾಗಿ ತಲಾ 1 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸೇರಿದಂತೆ ಇತರರಿದ್ದರು.