ಹೊಸ ದಿಗಂತ ಡಿಜಿಟಲ್ ಡೆಸ್ಕ್
ವಿದ್ಯುತ್ ಚಾಲಿತ ಸ್ಕೂಟರುಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ವಿದ್ಯಮಾನವು ಕೇವಲ ಕಂಪನಿಗಳನ್ನು ಮಾತ್ರವಲ್ಲದೇ ಸರ್ಕಾರದ ನೀತಿ ನಿರೂಪಕರನ್ನೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವಂತೆ ಮಾಡಿದೆ. ಯಾವೆಲ್ಲ ವಾಹನಗಳಲ್ಲಿ ಬೆಂಕಿ ಸಮಸ್ಯೆ ತಲೆದೋರಿತೋ ಆ ಇಡೀ ಬ್ಯಾಚುಗಳನ್ನೇ ಹಿಂದಕ್ಕೆ ಪಡೆಯುವಂತೆ ನೀತಿ ಆಯೋಗದ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಸಂಬಂಧಿತ ಕಂಪನಿಗಳಿಗೆ ಕೇಳಿಕೊಂಡಿದ್ದಾರೆ.
ದೇಶವು ಎಲೆಕ್ಟ್ರಿಕ್ ಕ್ರಾಂತಿಯೊಂದಕ್ಕೆ ಕಾಲಿಡುವ ಹುರುಪಿನಲ್ಲಿರುವಾಗ ಸಂಭವಿಸುತ್ತಿರುವ ಇಂಥ ಘಟನೆಗಳು, ಕೇವಲ ಎಲೆಕ್ಟ್ರಿಕ್ ವಾಹನ ಉತ್ಪಾದಕರನ್ನು ಮಾತ್ರವಲ್ಲದೇ ಸರ್ಕಾರವನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ಏಕೆಂದರೆ, ಜನರಲ್ಲಿ ವಿದ್ಯುತ್ ಚಾಲಿತ ವಾಹನಗಳ ಗುಣಮಟ್ಟದ ಬಗ್ಗೆ ವಿಶ್ವಾಸ ಕದಡಿ, ಭಯ ಹುಟ್ಟಿದ್ದೇ ಆದರೆ ಅದು ಕೇವಲ ಸಂಬಂಧಿತ ಕಂಪನಿಗಳಿಗಷ್ಟೇ ನಷ್ಟ ಉಂಟುಮಾಡುವುದಿಲ್ಲ, ಬದಲಿಗೆ ದೇಶದ ವಿದ್ಯುತ್-ಚಾಲಿತ ವಾಹನ ಕ್ರಾಂತಿಯ ನೀಲನಕ್ಷೆಯನ್ನೇ ಹಾಳುಗೆಡವಿಬಿಡುತ್ತದೆ.
“ದೇಶದಲ್ಲಿ ಬ್ಯಾಟರಿ ಉತ್ಪಾದನೆ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ಇದರ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ” ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಸಿ ಎನ್ ಬಿ ಸಿ ವಾಹಿನಿಯೊಂದಿಗೆ ಮಾತನಾಡುತ್ತ ಹೇಳಿದ್ದಾರೆ.
ಕೆಲದಿನಗಳ ಹಿಂದೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹ, “ವಿದ್ಯುತ್-ಚಾಲಿತ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವ ವಿದ್ಯಮಾನ ಬಹಳ ಗಂಭೀರವಾದದ್ದು. ಭಾರತದ ಅತಿ ಉಷ್ಣದ ಹವಾಮಾನವೇ ಇದಕ್ಕೆ ಕಾರಣವಿದ್ದಿರಬಹುದು. ಈ ಎಲ್ಲ ಘಟನೆಗಳ ಬಗ್ಗೆ ವಿಧಿವಿಜ್ಞಾನದ ತನಿಖೆಗೆ ಆದೇಶವಾಗಿದೆ” ಎಂದು ಸಂಸತ್ತಿನಲ್ಲಿ ಹೇಳಿದ್ದರು.
ಹೆಚ್ಚಿನ ಮಾಹಿತಿಗಾಗಿ ಓದಿ: ಭಾರಿ ಭರವಸೆ ಮೂಡಿಸಿದ್ದ ಎಲೆಕ್ಟ್ರಿಕ್ ಸ್ಕೂಟರುಗಳಿಗೆ ಭಾರತದಲ್ಲೇಕೆ ಬೆಂಕಿ ಹೊತ್ತಿಕೊಳ್ಳುತ್ತಿದೆ?