ಕಾಡಾನೆ ದಾಳಿ: ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರ

ಹೊಸದಿಗಂತ ವರದಿ, ಕೊಡಗು:
ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೋಣಿಕೊಪ್ಪ ಸಮೀಪದ ಕಳತ್ಮಾಡು ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕಾಡಾನೆ ದಾಳಿಯಿಂದಾಗಿ ಹೊಸೊಕ್ಲು ಮಾಚಯ್ಯ (72) ಎಂಬವರ ಎಡಗಾಲು ಸಂಪೂರ್ಣ ಮುರಿದಿದ್ದು, ಎದೆಯ ಭಾಗಕ್ಕೆ ಹಾಗೂ ಬಲಗಾಲಿಗೂ ಪೆಟ್ಟು ಬಿದ್ದಿರುವ ಅವರನ್ನು ಮೈಸೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಬಗ್ಗೆ ವಿಷಯ ತಿಳಿದ ಅಲ್ಲಿನ ಪಂಚಾಯಿತಿ ಉಪಾಧ್ಯಕ್ಷ ಕೊಲ್ಲಿರ ಧನು ಪೂಣಚ್ಚ ಹಾಗೂ ಸದಸ್ಯ ವಿ.ವಿ.ಪ್ರಕಾಶ್ ಗ್ರಾಮಸ್ಥರೊಂದಿಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅರಣ್ಯ ಇಲಾಖೆಯ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ರಾಜಪ್ಪ ಹಾಗೂ ಸಿಬ್ಬಂದಿ ದಿವಾಕರ್ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು.ಅಲ್ಲದೆ ಇಲಾಖೆಯ ವತಿಯಿಂದ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವ ಭರವಸೆ ನೀಡಿದರು.
ಈ ಭಾಗದಲ್ಲಿ ನಿರಂತರ ಕಾಡಾನೆಗಳ ಉಪಟಳವಿದ್ದು, ನಾಗರಿಕರು ಪ್ರತಿನಿತ್ಯ ಪ್ರಾಣ ಭಯದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಂಚಾಯಿತಿ ಉಪಾಧ್ಯಕ್ಷ ಕೊಲ್ಲಿರ ಧನು ಪೂಣಚ್ಚ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!