ಮೋದಿಯವರ ದೇವಾಲಯಗಳ ಸಮಗ್ರ ಅಭಿವೃದ್ಧಿಯ ಕನಸಿಗೆ ಆನೆ ಬಲ ತುಂಬಿದ ಬಜೆಟ್‌: ಸಚಿವೆ ಶಶಿಕಲಾ ಜೊಲ್ಲೆ

ಹೊಸದಿಗಂತ ವರದಿ, ಬೆಳಗಾವಿ :

ದೇವಾಲಯಗಳನ್ನು ಸಮಗ್ರ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡುವ ನನ್ನ ಉದ್ದೇಶಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ ಆನೆ ಬಲ ತುಂಬಿದೆ ಎಂದು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ದಿಗೆ 100 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದ್ದು, ಈ ಮೂಲಕ ಹನುಮನ ಜನ್ಮಸ್ಥಳ ಅಂಜನಾದ್ರಿಯನ್ನು ಅಯೋಧ್ಯ ಮಾದರಿಯಲ್ಲಿ ಅಭಿವೃದ್ದಿಗೊಳಿಸಲು ಮುನ್ನಡಿ ಇಟ್ಟಂತಾಗಿದೆ. ಆಂಧ್ರಪ್ರದೇಶದಲ್ಲಿರುವ ಶ್ರೀಶೈಲದಲ್ಲಿ ಕರ್ನಾಟಕದ ಯಾತ್ರಿಗಳ ಅನುಕೂಲಕ್ಕಾಗಿ ಯಾತ್ರಿ ನಿವಾಸ ಸಂಕೀರ್ಣ ನಿರ್ಮಾಣಕ್ಕೆ ಎರಡು ಹಂತದಲ್ಲಿ 85 ಕೋಟಿ ರೂಪಾಯಿಗಳನ್ನು ಘೋಷಿಸಿದ್ದು, ಮೊದಲ ಹಂತದಲ್ಲಿ 45 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಪಂಡರಾಪುರದಲ್ಲೂ ಅತಿಥಿಗೃಹವನ್ನು ಅಭಿವೃದ್ದಿ ಪಡಿಸಲು ಘೋಷಿಸಲಾಗಿದೆ.

ಬಹುದಿನಗಳ ಬೇಡಿಕೆಯಾಗಿದ್ದ ತಸ್ತೀಕ್‌ ಹಣವನ್ನು 48 ಸಾವಿರಗಳಿಂದ 60 ಸಾವಿರಗಳಿಗೆ ಹೆಚ್ಚಿಸುವ ಮೂಲಕ ರಾಜ್ಯದ ಮುಜರಾಯಿ ದೇವಸ್ಥಾನಗಳ ಅರ್ಚಕರಿಗೆ ಜೀವನ ನಡೆಸಲು ಅನುಕೂಲವಾಗಲಿದೆ. ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆಯನ್ನು 30 ಸಾವಿರ ಯಾತ್ರಾರ್ಥಿಗಳಿಗೆ ತಲಾ 5,000 ರೂಗಳ ಸಹಾಯಧನ ನೀಡುವುದನ್ನ. ಪುಣ್ಯಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತ ರಿಯಾಯಿತಿ ದರದಲ್ಲಿ ಪ್ಯಾಕೇಜುಗಳನ್ನು ಘೋಷಿಸಲಾಗಿದೆ. ಮೊದಲ ಹಂತದಲ್ಲಿ ಕಾಶಿಗೆ ವಿಶೇಷ ರೈಲು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂಬ ಬೇಡಿಕೆ ಬಹುಕಾಲದಿಂದ ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ, ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡಿ, ಅಭಿವೃದ್ದಿ ಕಾಮಗಾರಿಗಳ ವಿವೇಚನೆಯನ್ನು ದೇವಾಲಯಗಳಿಗೆ ಪ್ರತ್ಯಾಯೋಜಿಸಲು ಕಾನೂನು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಘೋಷನೆ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಚಾಮುಂಡಿ ಬೆಟ್ಟ, ಮುಳ್ಳಯನಗಿರಿ, ನಂದಿಬೆಟ್ಟದಲ್ಲಿ ರೋಪ್‌ ವೇ ನಿರ್ಮಾಣ ಪ್ರವಾಸೋದ್ಯಮಕ್ಕೆ ಬೂಸ್ಟ್‌ ನೀಡಲಿದೆ.  ಪ್ರಧಾನಿ ನರೆಂದ್ರ ಮೋದಿ ರವರ ಡಿಜಿಟಲ್‌ ಇಂಡಿಯಾ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಇಲಾಖೆಯ ದೇವಾಲಯಗಳಲ್ಲಿ ಪಾರದರ್ಶಕತೆ, ದೇವಾಲಯದ ಹಣಕಾಸಿನ ಉತ್ತರದಾಯಿತ್ವ, ಡಿಜಿಟಲ್‌ ಪೇಮೆಂಟ್ಸ್‌ ಸೌಲಭ್ಯ, ಇತಿಹಾಸ, ಸೇವಾರ್ಥ, ಉತ್ಸವ ಇತ್ಯಾಧಿ ಮಾಹಿತಿಗಳನ್ನು ಆನ್‍ಲೈನ್ ಮುಖಾಂತರ ಭಕ್ತಾಧಿಗಳಿಗೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಐ.ಟಿ.ಎಂ.ಎಸ್ (Integrated Temple Management System) ತಂತ್ರಾಂಶವನ್ನು ಅನುಷ್ಠಾನಗೊಳಿಸಿರುವುದು ಹೆಮ್ಮೆಯ ವಿಷಯವಾಗಿದೆ.

ದೈವ ಸಂಕಲ್ಪ ಯೋಜನೆಯ ಮೂಲಕ ಮೊದಲ ಹಂತದಲ್ಲಿ ‘ಎ’ ದರ್ಜೆಯ 25 ದೇವಾಲಯಗಳನ್ನು 1140 ಕೋಟಿಗಳ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ಪ್ರಧಾನಿ ನರೇಂದ್ರ ಮೋದಿಯವರ ದೇವಾಲಯಗಳ ಸಮಗ್ರ ಅಭಿವೃದ್ದಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ನನ್ನ ಉದ್ದೇಶಕ್ಕೆ ಆನೆ ಬಲ ತುಂಬಿದ ಬಜೆಟ್‌ ಇದಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!