ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಮಿಯಲ್ಲಿನ ಹಸಿರು ನಾಶ ಮಾಡಿ ಕಾಂಕ್ರೀಟು ಮಾಡುವ ಮನುಷ್ಯರ ದುರಾಸೆಯಿಂದ ಎಷ್ಟೋ ಪ್ರಾಣಿಗಳು ಆಹಾರವಿಲ್ಲದೆ ಬದುಕುತ್ತಿವೆ. ಕಾಡುಗಳನ್ನು ನಾಶ ಮಾಡಿ ಭೂಮಿಗೆ ವಿಷ ಉಳಿಸುವ ಜನರು ತಮಗೆ ಮಾತ್ರವಲ್ಲದೇ ಪ್ರಾಣಿಗಳ ಜೀವಕ್ಕೂ ಅಪಾಯತಂದಿಕ್ಕುತ್ತಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತಾಗಿದೆ ಶ್ರೀಲಂಕಾದ ಅಂಪಾರಾ ಜಿಲ್ಲೆ. ಇಲ್ಲಿನ ಸರ್ಕಾರದ ತ್ಯಾಜ್ಯ ವಿಲೇವಾರಿಯ ಅವ್ಯವಸ್ಥೆಯಿಂದ ಸುಮಾರು 20 ಆನೆಗಳು ಪ್ಲಾಸ್ಟಿಟ್ ಸೇವಿಸಿ ಪ್ರಾಣ ಬಿಟ್ಟಿವೆ.
ಅಭಿವೃದ್ಧಿ ಹಾಗೂ ತಂತ್ರಜ್ಞಾನ ಹೆಚ್ಚಿಸುತ್ತೇವೆ ಎಂದು ಕಾಡಿನೊಳಗೆ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಸುರಿದ ಸರ್ಕಾರದ ಅವ್ಯವಸ್ಥೆಯಿಂದ ಕಳೆದ 8 ವರ್ಷಗಳಲ್ಲಿ ಬರೋಬ್ಬರಿ 20 ಆನೆಗಳು ಮೃತಪಟ್ಟಿವೆ.
ಪಲ್ಲಕ್ಕಾಡು ಎಂಬ ಗ್ರಾಮದಲ್ಲಿನ ಕಾಡಿನಲ್ಲಿ ಕಸದ ರಾಶಿ ಸುರಿಯಲಾಗಿದ್ದು, ಆನೆಗಳು ಆಹಾರ ವಿಲ್ಲದೆ ಪ್ಲಾಸ್ಟಿಟ್ ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಈ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಪಶು ಸಂರಕ್ಷಣಾ ತಜ್ಞರು, ಈ ಪ್ರದೇಶದ ಆನೆಗಳು ಪ್ಲಾಸ್ಟಿಕ್ ತ್ಯಾಜ್ಯ ಸೇವಿಸಿ ಮೃತಪಟ್ಟಿವೆ. ಪ್ರಾಣಿಗಳ ಮರೋತ್ತರ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಕಸ ಪತ್ತೆಯಾಗಿದೆ ಎಂದು ಗುಡುಗಿದ್ದಾರೆ.
ಪ್ರಾಣಿಗಳ ಹೊಟ್ಟೆಯಲ್ಲಿ ಕೇವಲ ಪಾಲಿಥೀನ್, ಆಹಾರ ಕವರ್ ಗಳು, ಪ್ಲಾಸ್ಟಿಕ್ ಗಳು ಸೇರಿ ಇತರ ವಸ್ತುಗಳು ಹಾಗೂ ನೀರು ಮಾತ್ರ ಪತ್ತೆಯಾಗಿದೆ ಎಂದು ವನ್ಯಜೀವಿ ಪಶುವೈದ್ಯ ನಿಹಾಲ್ ಪುಷ್ಪಕುಮಾರ್ ತಿಳಿಸಿದ್ದಾರೆ.
ರಾಜಧಾನಿ ಕೊಲಂಬೋದಿಂದ 210 ಕಿ.ಮೀ ದೂರದಲ್ಲಿರುವ ಗ್ರಾಮವನ್ನು ಡಂಪಿಂಗ್ ಯಾರ್ಡ್ ಮಾಡಲಾಗಿದೆ. ಇಲ್ಲಿನ ಸುಮಾರು 54 ತ್ಯಾಜ್ಯ ಡಂಪ್ ಮಾಡುವ ಪ್ರದೇಶಗಳು ವನ್ಯ ಜೀವಿ ಸ್ಥಳವಾಗಿದೆ. ಸುಮಾರು 300 ಆನೆಗಳು ಅಲ್ಲಿಯೇ ಸುತ್ತಾಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.