ತಮಿಳುನಾಡು ಬಿಜೆಪಿಯಿಂದ ‘ಎನ್ ಮಣ್ಣ್, ಎನ್ ಮಕ್ಕಳ್’ ಪಾದಯಾತ್ರೆಗೆ ನಾಳೆ ಚಾಲನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಲೋಕಸಭಾ ಚುನಾವಣೆ ಹಿತ ದೃಷ್ಟಿಯಿಂದ ತಮಿಳುನಾಡು ಬಿಜೆಪಿ ಘಟಕ ಜು.28ರಿಂದ 6 ತಿಂಗಳ ಕಾಲ ‘ಎನ್ ಮಣ್ಣ್, ಎನ್ ಮಕ್ಕಳ್’ (ನನ್ನ ನೆಲ, ನನ್ನ ಜನ) ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ಸಾಗಲಿದೆ.

ಪಾದಯಾತ್ರೆಗೆ ಶುಕ್ರವಾರ ಸಂಜೆ ರಾಮೇಶ್ವರದಲ್ಲಿ ಪಕ್ಷದ ಹಿರಿಯ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ ಎಂದು ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

‘ಎಲ್ಲ 39 ಲೋಕಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ನಡೆಸುವ ದೃಷ್ಟಿಯಿಂದ 5 ಹಂತಗಳಲ್ಲಿ ಆಯೋಜನೆಗೆ ನಿರ್ಧರಿಸಲಾಗಿದೆ. 2024ರ ಜನವರಿ 11ರಂದು ಪಾದಯಾತ್ರೆ ಅಂತ್ಯವಾಗಲಿದೆ. ಅಮಿತ್ ಶಾ ಅವರು ಉದ್ಘಾಟನೆ ಮಾಡಿದ ಬಳಿಕ ಈ ಚುನಾವಣಾ ಪ್ರಚಾರವು ಜುಲೈ 29ರಂದು ರಾಮೇಶ್ವರದಿಂದ ಆರಂಭವಾಗಲಿದೆ’ ಎಂದು ಅಣ್ಣಾಮಲೈ ತಿಳಿಸಿದರು.

ಅಣ್ಣಾಮಲೈ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆಯು 1,770 ಕಿ.ಮೀ ಸಾಗಲಿದೆ. ಗ್ರಾಮೀಣ ಪ್ರದೇಶದ ಉಳಿದ ಭಾಗಗಳಲ್ಲಿ ವಾಹನಗಳ ಮೂಲಕ ಪ್ರಚಾರ ಕಾರ್ಯ ನಡೆಯಲಿದೆ. ಈ ಪಾದಯಾತ್ರೆ ವೇಳೆ 10 ಪ್ರಮುಖ ರ್‍ಯಾಲಿಗಳು ನಡೆಯಲಿದ್ದು, ಪ್ರತಿ ರ್‍ಯಾಲಿಯಲ್ಲಿ ಒಬ್ಬರು ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.

‘ನಾವು ಪ್ರಧಾನಿ ಮೋದಿಯವರ ಸಾಧನೆಗಳನ್ನು ಜನರಿಗೆ ಎತ್ತಿ ತೋರಿಸುತ್ತೇವೆ ಮತ್ತು ಮೋದಿಜಿಯವರನ್ನು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ತರಲು ಜನರ ಬೆಂಬಲವನ್ನು ಕೋರುತ್ತೇವೆ, ಕ್ಷೇತ್ರವಾರು ಜನರ ಒಳಿತಿಗಾಗಿ ಬಿಜೆಪಿ ಏನು ಮಾಡಿದೆ ಎಂಬುದನ್ನು ನಾವು ವಿವರಿಸುತ್ತೇವೆ’ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!