ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಹಲವು ಸಮಯದಿಂದ ಈ ಕೃತ್ಯ ಎಸಗುತ್ತಿದ್ದರೂ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ.
ಮೊಬೈಲ್ ಚಿತ್ರೀಕರಣ ಆದ ಬಳಿಕ ಆ ಮೊಬೈಲ್ ಅನ್ನು ಮಧ್ಯಾಹ್ನದ ಸಮಯದಲ್ಲಿ ಕಾರಿನಲ್ಲಿ ಮತ್ತು ಬೈಕಿನಲ್ಲಿ ಬರುತ್ತಿದ್ದ ಯುವಕರಿಗೆ ನೀಡುತ್ತಿದ್ದರು. ಈ ಬಗ್ಗೆ ದೂರು ನೀಡಿದ್ದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯರು ಯುವಕರೊಂದಿಗೆ ಮೊಬೈಲ್ ಬದಲಾವಣೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೂ ವಿಡಿಯೋ ಮಾಡಿದ ವಿದ್ಯಾರ್ಥಿನಿಯರ ಮೇಲೆ ಯಾವುದೇ ಕ್ರಮವನ್ನು ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಕೈಗೊಂಡಿಲ್ಲ. ಜುಲೈ 18 ರಂದು ನಡೆದ ಘಟನೆಯನ್ನು ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿನಿಯರ ಮೇಲೆ ಕ್ರಮ ಕೈಗೊಂಡಿದ್ದಾರೆ. ಪ್ರತಿಭಟಿಸದಿದ್ದರೆ ನಮ್ಮ ವಿಡಿಯೋ ಕೂಡ ಆರು ತಿಂಗಳ ಬಳಿಕ ವೈರಲ್ ಆಗುತ್ತಿತ್ತು ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಎಬಿವಿಪಿ ನಾಯಕಿ ಐಶ್ವರ್ಯ, ಈ ವಿದ್ಯಾರ್ಥಿಗಳ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ವಿವರವಾದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. “ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲು ಇಷ್ಟು ಸಮಯ ತೆಗೆದುಕೊಂಡಿರುವುದರ ಬಗ್ಗೆಯೂ ಅನುಮಾನವಿದೆ. ತನಿಖಾಧಿಕಾರಿಗಳನ್ನು ಬದಲಾಯಿಸಬೇಕು ಮತ್ತು ಘಟನೆಯ ತನಿಖೆಗೆ ಹೊಸ ತಂಡವನ್ನು ರಚಿಸಬೇಕು. ಇದು ಬೇರೆ ಕಾಲೇಜುಗಳಲ್ಲೂ ನಡೆದಿರಬಹುದು. ಸಂತ್ರಸ್ತರಿಗೆ ಸಹಾಯ ಮಾಡಲು ಶಿಕ್ಷಣ ಇಲಾಖೆ ಸಹಾಯವಾಣಿ ತೆರೆಯಬೇಕು” ಎಂದು ಒತ್ತಾಯಿಸಿದರು.