ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಬಿಹಾರದ ಸುಪಾರಿ ಕಿಲ್ಲರ್ ಮೃತಪಟ್ಟಿರುವ ಘಟನೆ ಇಲ್ಲಿನ ರೈಲ್ ಸಿಟಿ ಲುಮ್ಡಿಂಗ್ನಲ್ಲಿ ನಡೆದಿದೆ.
ಲುಮ್ಡಿಂಗ್ನಲ್ಲಿ ನಡೆದಿದ್ದ ಭಾರತೀಯ ರೈಲ್ವೆ ಉದ್ಯೋಗಿ ತರುಣ್ ಚಕ್ರವರ್ತಿ ಹತ್ಯೆಯಲ್ಲಿ ಬಿಹಾರ ಮೂಲದ ಮೋಹನ್ ಕುಮಾರ್ನನ್ನು ಡಿಸೆಂಬರ್ 9 ರಂದು ಬೊಂಗೈಗಾಂವ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದರು.
ಭಾನುವಾರ ರಾತ್ರಿ ಪೊಲೀಸರು ತರುಣ್ ಚಕ್ರವರ್ತಿ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮೋಹನ್ ಕುಮಾರ್ನನ್ನು ಸ್ಥಳಕ್ಕೆ ಕರೆದೊಯ್ದಿದ್ದರು. ಶಸ್ತ್ರಾಸ್ತ್ರಗಳನ್ನು ಇರಿಸಲಾಗಿರುವ ರಹಸ್ಯ ಸ್ಥಳವನ್ನು ತೋರಿಸಿದ ನಂತರ, ಮೋಹನ್ ಕುಮಾರ್ ಪಿಸ್ತೂಲ್ನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ಈ ವೇಳೆ ಪೊಲೀಸರು ಹಲವು ಬಾರಿ ಆತನ ಮೇಲೆ ಗುಂಡು ಹಾರಿಸಿದ್ದಾರೆ.
ಇದರಿಂದ ಗಾಯಗೊಂಡಿದ್ದ ಅವನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಅವನು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಮೋಹನ್ ಕುಮಾರ್ ಬಳಸುತ್ತಿದ್ದ ಪಿಸ್ತೂಲ್ ಜತೆಗೆ ಎರಡು ದೇಶಿ ನಿರ್ಮಿತ ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.