ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನಲ್ಲಿ ಯಾವುದೇ ಸಂಸದರು ಜಾತಿ ಮತ್ತು ಧರ್ಮಗಳನ್ನು ಉಲ್ಲೇಖಿಸದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎ ಆರ್ ರೆಡ್ಡಿ ತಮ್ಮ ಜಾತಿಯನ್ನು ಉಲ್ಲೇಖಿಸಿ ಬಳಸಿರುವ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಜನತೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ನಮ್ಮನ್ನು ಸಂಸದರಾಗಿ ಲೋಕಸಭೆಗೆ ಆಯ್ಕೆ ಮಾಡಿಲ್ಲ. ಯಾರೇ ಆಗಲಿ ಸದನದಲ್ಲಿ ಇಂಥ ಪದಗಳನ್ನು ಬಳಸಬಾರದು, ಇಲ್ಲವಾದರೆ ಅಂಥ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾವು ಕೆಳ ಜಾತಿಗೆ ಸೇರಿದವರಾಗಿರುವುದರಿಂದಲೇ ತಮ್ಮ ಹಿಂದಿ ಭಾಷೆಯ ಪ್ರಾವೀಣ್ಯತೆಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲ ನಿರ್ದಿಷ್ಟ ಟಿಪ್ಪಣಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದರು ಆಕ್ಷೇಪಿಸಿದ ನಂತರ ಸ್ಪೀಕರ್ ಈ ಸೂಚನೆ ನೀಡಿದ್ದಾರೆ.