ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪಟ್ಟಣದ ಬಾಪುಗೌಡ ಕಲ್ಯಾಣ ಮಂಟಪದಲ್ಲಿ ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಮಲಾಪುರ ಮಾರ್ಗ ಮಧ್ಯದಲ್ಲಿ ಬುಧವಾರ ಮಧ್ಯರಾತ್ರಿ ಕಮಲಾಪುರ ಪೋಲಿಸರು ತಡೆದು ಕಲಬುರಗಿ ಜಿಲ್ಲೆಗೆ ಆಗಮಿಸದಂತೆ ನಿರ್ಭಂದ ಹಾಕಿದ್ದಲ್ಲದೆ, ವಾಪಸ್ ಕಳಿಸಿರುವ ಘಟನೆ ನಡೆದಿದೆ.
ಗುರುವಾರ ಚಿತ್ತಾಪುರ ತಾಲೂಕಿನ ಪಟ್ಟಣದ ಬಾಪುಗೌಡ ಕಲ್ಯಾಣ ಮಂಟಪದಲ್ಲಿ ನಮೋ ಬ್ರಿಗೇಡ್ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೀದರ್ ಜಿಲ್ಲೆಯ ಭಾಲ್ಕಿಯಿಂದ ಕಲಬುರಗಿ ಕಡೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಗಮಿಸುತ್ತಿದ್ದರು,ಈ ವೇಳೆ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಿ, ಉಪ ವಿಭಾಗದ ಅಧಿಕಾರಿ ರೂಪೇಂದ್ರ ಕೌರ್ ಅವರು ಆದೇಶ ಹೊರಡಿಸಿದ್ದಾರೆ.
ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣದಿಂದ ಶಾಂತಿಗೆ ಧಕ್ಕೆ ಬರುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಅವರ ಕಲಬುರಗಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಮಧ್ಯರಾತ್ರಿ ಕಲಬುರಗಿ ಜಿಲ್ಲೆಯ ಕಮಲಾಪುರ ಬಳಿ ಅವರನ್ನು ತಡೆದು ಪ್ರವೇಶ ನೀಡದೇ ಮರಳಿ ಬೀದರ್ ಕಡೆಗೆ ಪೋಲಿಸರು ವಾಪಸ್ ಕಳಿಸಿದ್ದಾರೆ.
ಮಧ್ಯರಾತ್ರಿ ಪೋಲಿಸರ ಮತ್ತು ಚಕ್ರವರ್ತಿ ಸೂಲಿಬೆಲೆ ನಡುವೆ ನಿರ್ಭಂಧ ಹೇರಿದ ಹಿನ್ನೆಲೆಯಲ್ಲಿ ತೀವ್ರ ವಾಗ್ವಾದ ನಡೆದಿದೆ.