ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನ ಫಿರೋಜ್ಪುರ್ನಲ್ಲಿ ಆಯೋಜನೆಗೊಂಡಿದ್ದ ರ್ಯಾಲಿಯಲ್ಲಿ ಭಾಗಿಯಾಗಲು ತೆರಳಿದ್ದ ಪ್ರಧಾನಿ ಮೋದಿ ಅವರಿಗೆ ಭದ್ರತಾ ವೈಫಲ್ಯ ಎದುರಾಗಿದ್ದು, ಈ ಹಿನ್ನೆಲೆ ಸಭೆಯಲ್ಲಿ ಭಾಗಿಯಾಗದೇ ದೆಹಲಿಗೆ ವಾಪಸ್ ಆಗಿದ್ದರು. ಇದರಿಂದ ದೇಶದೆಲ್ಲೆಡೆ ಪಂಜಾಬ್ ಸರ್ಕಾರದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಇನ್ನು ಈ ವಿಚಾರವಾಗಿ ಮಾತನಾಡಿರುವ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಯಾವುದೇ ರೀತಿಯ ಲೋಪವಾಗಿಲ್ಲ, ಅವರು ಪಾಪಸ್ ದೆಹಲಿ ಹೋಗಿರುವುದಕ್ಕೆ ವಿಷಾದವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಮ್ಮ ಪ್ರಧಾನಿ ಬಗ್ಗೆ ಗೌರವವಿದೆ. ಫಿರೋಜ್ಪುರ್ ಜಿಲ್ಲೆಗೆ ಭೇಟಿ ನೀಡುತ್ತಿದ್ದ ವೇಳೆ ಉಂಟಾದ ಸಮಸ್ಯೆಯಿಂದ ಅವರು ಹಿಂತಿರುಗಿ ಹೋಗಿರುವುದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಒಂದು ವೇಳೆ ಭದ್ರತೆಯಲ್ಲಿ ಯಾವುದಾದರೂ ಲೋಪ ಕಂಡು ಬಂದಿರುವುದು ಖಚಿತಗೊಂಡರೆ ತನಿಖೆ ನಡೆಸಲು ನಾವು ಸಿದ್ಧ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಬಟಿಂಡಾಗೆ ತೆರಳಿ ನಾನೇ ಬರಮಾಡಿಕೊಳ್ಳಬೇಕಾಗಿತ್ತು. ಆದರೆ ನನ್ನ ಜೊತೆಗಿದ್ದವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರಿಂದ ಅಲ್ಲಿಗೆ ಹೋಗಿರಲಿಲ್ಲ ಎಂದರು.