ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಪುತ್ರನಿಗೆ ಲೋಕಸಭಾ ಟಿಕೆಟ್ ದೊರೆಯದ ಕಾರಣ ಈಶ್ವರಪ್ಪ ಮುನಿಸಿಕೊಂಡಿದ್ದು,ಅವರ ಮನವೊಲಿಸುವ ಪ್ರಯತ್ನ ವರಿಷ್ಠರು ಹಾಗೂ ನಾನು ಸಹ ಮಾಡುವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರು ಅತ್ಯಂತ ಹಿರಿಯ ನಾಯಕರು. ನನಗಿಂತ ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇದ್ದವರು. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅನ್ಯ ಯೋಚನೆ ಮಾಡಲಾರರು ಎಂದರು.
ನಾನು ಸಹ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಅವರ ಮನವೊಲಿಸುವ ವಿಶ್ವಾಸವಿದೆ. ಪಕ್ಷದ ಹಿರಿಯ ನಾಯಕರಾಗಿ ಅವರು ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು. ಟಿಕೆಟ್ ಸಿಗದೇ ಇದ್ದಾಗ ಸಹಜವಾಗಿಯೇ ಎಲ್ಲರಿಗೂ ಬೇಸರ ಆಗುತ್ತದೆ. ಹಾಗಾಗಿ ಪರ-ವಿರೋಧ ಅಭಿಪ್ರಾಯ ಸಾಮಾನ್ಯವಾಗಿರುತ್ತದೆ. ಆದರೆ, ಪಕ್ಷದ ಹೈಕಮಾಂಡ್ ಅದೆಲ್ಲವನ್ನು ಸರಿಪಡಿಸುತ್ತದೆ ಎಂದು ಹೇಳಿದರು.