ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಸಿಕ್ಕರೂ ಮೂವರು ಆರೋಪಿಗಳು ಇನ್ನು ತುಮಕೂರು ಜೈಲಿನಲ್ಲೇ ಉಳಿದುಕೊಂಡಿದ್ದಾರೆ.
ಚಾರ್ಜ್ಶೀಟ್ ಸಲ್ಲಿಕೆ ನಂತರ ದರ್ಶನ್ ಗ್ಯಾಂಗ್ನ ಆರೋಪಿಗಳಾದ ಕಾರ್ತಿಕ್ ಅಲಿಯಾಸ್ ಕಪ್ಪೆ, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿಗೆ ಕಳೆದ ಸೋಮವಾರ ಬೇಲ್ ಸಿಕ್ಕಿತ್ತು. ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದ್ರೆ, ನಿಖಿಲ್ ನಾಯಕ್ ಹಾಗೂ ಕಾರ್ತಿಕ್ಗೆ 57ನೇ ಸಿಸಿಹೆಚ್ ಕೋರ್ಟ್ ಬೇಲ್ ನೀಡಿತ್ತು. 1 ಲಕ್ಷ ರೂಪಾಯಿ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಸಾಕ್ಷ್ಯಗಳಿಗೆ ಬೆದರಿಕೆ ಹಾಕಬಾರದು, ವಿಚಾರಣೆಗೆ ಹಾಜರಾಗಬೇಕು ಎನ್ನುವ ಷರತ್ತಿನ ಮೇಲೆ ಜಾಮೀನು ನೀಡಿತ್ತು.
ಆದ್ರೆ ಈವರೆಗೂ ಶ್ಯೂರಿಟಿ ಯಾರು ಕೂಡ ಹಾಕದ ಕಾರಣ ಮೂವರು ಆರೋಪಿಗಳು ಜೈಲಿನಲ್ಲೇ ಇದ್ದಾರೆ. ಜಾಮೀನು ಮಂಜುರಾದರೂ ಶ್ಯೂರಿಟಿಗೆ ವ್ಯವಸ್ಥೆಯಾಗದೆ ಪರದಾಡುವಂತಾಗಿದೆ. ಆರೋಪಿಗಳ ಕಷ್ಟದ ಕಾಲದಲ್ಲಿ ಇತರರು ಕೈಕೊಟ್ಟಿದ್ದಾರೆ. ಕೈ ಹಿಡಿಯಬಹುದು ಅಂದುಕೊಂಡವರಿಂದ ಸಹಾಯಹಸ್ತ ಸಿಗದೆ ಸಮಸ್ಯೆಗೆ ಸಿಲುಕಿದಂತೆ ಆಗಿದೆ. ಹಣದಾಸೆಗಾಗಿ ಕೇಸ್ನಲ್ಲಿ ಸಿಲುಕಿ ಮೂವರು ಆರೋಪಿಗಳು ಜೈಲು ಸೇರಿದ್ದರು.
ತಲಾ 5 ಲಕ್ಷ ಹಣ ಸಿಗುತ್ತೆ ಎಂದು ಪ್ರಕರಣವನ್ನು ಮೈಮೇಲೆ ಎಳೆದುಕೊಂಡಿದ್ದರು. ರೇಣುಕಾಸ್ವಾಮಿ ಶವ ಸಾಗಾಟ ಮಾಡಿ, ಹಣಕಾಸು ವಿಚಾರವಾಗಿ ತಾವೇ ಹತ್ಯೆ ಮಾಡಿರುವುದಾಗಿ ಹೇಳಿ ಪೊಲೀಸರಿಗೆ ಶರಣಾಗಿದ್ದರು. ಅಂದು ಸೆರೆಂಡರ್ ಆಗಲು ಹೇಳಿದ್ದವರು ಇಂದು ಗಪ್ಚುಪ್ ಆಗಿದ್ದಾರೆ. ಶ್ಯೂರಿಟಿ ವ್ಯವಸ್ಥೆ ಆಗದಿದ್ದಕ್ಕೆ ತುಮಕೂರು ಜೈಲಿನಲ್ಲೇ ಮೂವರು ಇದುವರೆಗೂ ಇದ್ದಾರೆ. ವಕೀಲರ ಮೂಲಕ ಶ್ಯೂರಿಟಿ ವ್ಯವಸ್ಥೆಯನ್ನು ಆರೋಪಿಗಳು ಮಾಡ್ತಿದ್ದಾರೆ.