ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಶ್ರೀಕೃಷ್ಣ ಮಠಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಭಾನುವಾರ ಭೇಟಿ ನೀಡಿ ದೇವರ ದರುಶನ ಪಡೆದರು.
ಕೃಷ್ಣ ದರ್ಶನದ ಬಳಿಕ ಪುತ್ತಿಗೆ ಶ್ರೀ ಸುಗುಣೇಂಧ್ರತೀರ್ಥರನ್ನು ಭೇಟಿಯಾದ ಉಪೇಂದ್ರ, ಭಗವದ್ಗೀತೆಯ ಬಗ್ಗೆ ಸುಧೀರ್ಘ ಮಾತುಕತೆ ನಡೆಸಿ, ಗೀತಾ ಮಂದಿರ ವೀಕ್ಷಿಸಿದರು.
ಮಾತುಕತೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪುತ್ತಿಗೆ ಶ್ರೀಗಳ ಜೊತೆ ಭಗವದ್ಗೀತೆ ಬಗ್ಗೆ ಮಾತನಾಡಿದ ಬಳಿಕ ನನ್ನ ತಲೆಯಲ್ಲಿದ್ದ ವಿಚಾರಗಳು ಉದುರಿ ಹೋಗಿ ಖಾಲಿಯಾಗಿದೆ. ಅವರ ಮಾತು ಕೇಳುತ್ತಾ ಇರೋಣ ಅನಿಸುತ್ತಿದೆ. ಮನುಷ್ಯ ನಾನು ಅಂತ ಬಂದಾಗ ತುಂಬಾ ಸಫರ್ ಆಗ್ತಾನೆ, ನೀನು ಎಂದಾಗ ತುಂಬಾ ಹಗುರ ಆಗುತ್ತಾನೆ. ಇದರಲ್ಲೇ ಎಲ್ಲಾ ವಿಷಯಗಳು ಅಡಗಿವೆ ಎಂದರು.
ಯುಐ ಸಿನಿಮಾ ಜನರ ಆರ್ಶೀವಾದದಿಂದ ತುಂಬಾ ಚೆನ್ನಾಗಿ ಪ್ರದರ್ಶನಗೊಳ್ಳುತ್ತಿದೆ. ನಮ್ಮೆಲ್ಲರನ್ನು ಒಂದು ಶಕ್ತಿ ತೆಗೆದುಕೊಂಡು ಹೋಗುತ್ತಿದೆ ಎಂಬ ಸತ್ಯದ ಅರಿವಾಗಿದೆ. ನಾನು ಏನು ಮಾಡುತ್ತಿಲ್ಲ ಅನ್ನುವುದು ನನಗೆ ಖಂಡಿತ ಗೊತ್ತಾಗಿದೆ ಎಂದವರು ನುಡಿದರು.
ರಜನಿಕಾಂತ್ ಜೊತೆ ಸಿನಿಮಾ ವಿಚಾರ
ಶೂಟಿಂಗ್ ನಡೆಯುತ್ತಿದ್ದು, ಇನ್ನೊಂದು ಶೆಡ್ಯೂಲ್ ಇದೆ. ಫೆಬ್ರವರಿ,ಮಾರ್ಚ್, ಏಪ್ರಿಲ್ ವೇಳೆಗೆ ಬಿಡುಗಡೆ ಆಗಬಹುದು ಎಂದ ಅವರು, ಯು ಐ 2 ಇರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲಾ ದೈವಿಚ್ಛೆ ಎಂದರು.
ಉಪೇಂದ್ರ ಅವರಿಗೆ ಲಹರಿ ವೇಲು ಹಾಗು ಯುಐ ಸಿನೆಮಾ ತಂಡ ಸಾಥ್ ನೀಡಿದರು.