2024ರ ಲೋಕಸಭೆ ಗೆಲುವಿನ ಮೇಲೆ ಕಣ್ಣು: ಅ.5ರಂದು ಹೊಸ ರಾಷ್ಟ್ರೀಯ ಪಕ್ಷದ ಹೆಸರು ಘೋಷಿಸಲಿದ್ದಾರೆ ತೆಲಂಗಾಣ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2024 ರ ಸಂಸತ್ ಚುನಾವಣೆಯಲ್ಲಿ ಹೆಚ್ಚಿನ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಟಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ದಸರಾ ಶುಭ ದಿನದಂದು (ಅ. 5) ತಮ್ಮ ನೂತನ ರಾಷ್ಟ್ರೀಯ ಪಕ್ಷದ ಹೆಸರನ್ನು ಘೋಷಿಸಲಿದ್ದಾರೆ.
ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಅನ್ನು ಭಾರತ್ ಅಥವಾ ಭಾರತೀಯ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಮರುನಾಮಕರಣ ಮಾಡಲಾಗುವುದು ಎನ್ನಲಾಗುತ್ತಿದೆ. ʼತೆಲಂಗಾಣ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯರು, ಉನ್ನತ ನಾಯಕರು ಸೇರಿದಂತೆ 283 ಪಕ್ಷದ ಸದಸ್ಯರ ಸಭೆಯಲ್ಲಿ ದಸರಾದಲ್ಲಿ ನಿರ್ಣಯವನ್ನು ಮಂಡಿಸಲಾಗುವುದು. ಪಕ್ಷದ ಹೆಸರನ್ನು ಮಾತ್ರ ಬದಲಾಗುತ್ತದೆ. ತೆಲಂಗಾಣದ ಧ್ವಜ ಮತ್ತು ಚುನಾವಣಾ ಚಿಹ್ನೆ (ಕಾರು) ಬಿಆರ್‌ಎಸ್ ನೊಂದಿಗೆ ಮುಂದುವರಿಯುತ್ತದೆ.
ಅವರು ಕೆಸಿಆರ್ ನೇತೃತ್ವದ ಬಿಆರ್‌ಎಸ್ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳಲ್ಲಿ 100 ಕ್ಕೂ ಹೆಚ್ಚಿನ ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಜೊತೆಗೆ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬಹುದು. ಭಾನುವಾರ ಪ್ರಗತಿ ಭವನದಲ್ಲಿ ಮುಖಂಡರು ಮತ್ತು ಜಿಲ್ಲಾಧ್ಯಕ್ಷರೊಂದಿಗೆ ನಡೆದ ಸಭೆಯಲ್ಲಿ ಕೆಸಿಆರ್ ಅವರು ತಮ್ಮ ರಾಷ್ಟ್ರೀಯ ಪಕ್ಷದ ಬಗ್ಗೆ ಸಾಕಷ್ಟು ಸುಳಿವುಗಳನ್ನು ಬಿಟ್ಟುಕೊಟ್ಟರು. ಬಿಆರ್‌ಎಸ್ ಮತ್ತು ಅದರ ಕಾರ್ಯಸೂಚಿಯನ್ನು ರಾಷ್ಟ್ರದ ಜನರ ಬಳಿಗೆ ಕೊಂಡೊಯ್ಯಲು ಸಜ್ಜಾಗುವಂತೆ ಪಕ್ಷದ ನಾಯಕರಿಗೆ ಕರೆನೀಡಿದರು.
ಕೆಲವು ರಾಜಕೀಯ ಪಕ್ಷಗಳು ಬಿಆರ್‌ಎಸ್‌ನೊಂದಿಗೆ ವಿಲೀನಗೊಳ್ಳಬಹುದು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಿಆರ್‌ಎಸ್‌ನೊಂದಿಗೆ ಕೆಲಸ ಮಾಡಲು ಸಿದ್ಧರಿರುವ ಇತರ ನಾಯಕರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 9 ರಂದು ದೆಹಲಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗುವುದು, ಅಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ವಿವಿಧ ಸಮಾನ ಮನಸ್ಕ ರಾಜಕೀಯ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗುತ್ತದೆ. ರ್ಯಾಲಿಯಲ್ಲಿ ಕೆಸಿಆರ್ ಬಿಆರ್‌ಎಸ್ ʼರಾಷ್ಟ್ರೀಯ ಅಜೆಂಡಾಗಳನ್ನುʼ ಯನ್ನು ಘೋಷಿಸುವ ಸಾಧ್ಯತೆಯಿದೆ.
ಅಲ್ಲದೆ, ತೆಲಂಗಾಣದ ಮುನುಗೋಡು ಉಪಚುನಾವಣೆಯಲ್ಲಿಯೇ ಟಿಆರ್‌ಎಸ್ ಬಿಆರ್‌ಎಸ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಚುನಾವಣಾ ಆಯೋಗದಲ್ಲಿ ಬಿಆರ್‌ಎಸ್ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಲು ಟಿಆರ್‌ಎಸ್ ನಾಯಕರ ತಂಡ ದಸರಾ ನಂತರ ದೆಹಲಿಗೆ ತೆರಳಲಿದೆ. ಈಗಾಗಲೇ ಬಿಆರ್‌ಎಸ್ ಕಚೇರಿಗಾಗಿ ದೆಹಲಿಯಲ್ಲಿ ಕಟ್ಟಡವನ್ನು ಬಾಡಿಗೆಗೆ ಪಡೆಯಲಾಗಿದೆ.
ಬುಡಕಟ್ಟು ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಅವರು ಕೆಸಿಆರ್ ಅವರ ಸನ್ನಿಹಿತ ರಾಷ್ಟ್ರೀಯ ಪ್ರವೇಶದ ಬಗ್ಗೆ ಸುದ್ದಿಗಾರರಿಗೆ ಖಚಿತಪಡಿಸಿದ್ದಾರೆ. ಟಿಆರ್‌ಎಸ್ ಸರ್ಕಾರದ ಸಚೇತಕ ಮತ್ತು ಪಕ್ಷದ ಕೊತಗುಡೆಂ ಜಿಲ್ಲಾಧ್ಯಕ್ಷ ರೇಗಾ ಕಾಂತ ರಾವ್ ಮಾತನಾಡಿ, ʼಕೆಸಿಆರ್ ರಾಷ್ಟ್ರ ರಾಜಕಾರಣಕ್ಕೆ ಬರುತ್ತಾರೆ ಎಂದು ದೇಶದ ಜನರು, ವಿಶೇಷವಾಗಿ ಯುವಕರು ಕಾಯುತ್ತಿದ್ದಾರೆʼ ಎಂದಿದ್ದಾರೆ.
ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹಲವು ವೈಫಲ್ಯಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕಿದೆ ಎಂದು ಪಕ್ಷದ ನಾಯಕರಿಗೆ ಕೆಸಿಆರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಕೆಸಿಆರ್ ಅವರು ದಸರಾ ಅಥವಾ ಮರುದಿನ ಪ್ರಗತಿ ಭವನದಲ್ಲಿ ದೇಶದ ವಿವಿಧ ಭಾಗಗಳ ರೈತ ಸಂಘಗಳು, ವರ್ತಕ ಮತ್ತು ಕಾರ್ಮಿಕರ ಸಂಘಗಳು, ದಲಿತ ಮತ್ತು ಬುಡಕಟ್ಟು ಸಂಘಟನೆಗಳ ಮುಖಂಡರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!